
ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಕೊಡಗಿಗೆ ಪ್ರಾತಿನಿಧ್ಯ ಸಿಗದಿರುವುದಕ್ಕೆ ಹಾಗೂ ಎ.ಎಸ್ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕ ಪೊನ್ನಣ್ಣ ನವರಿಗೆ ಸಚಿವ ಸ್ಥಾನ ನೀಡದ ಹಿನ್ನಲೆ ಕೊಡಗು ಗೌಡ ಹಿತರಕ್ಷಣಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಮಡಿಕೇರಿ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಪಿ. ಎಲ್ ಸುರೇಶ್ ಅಮೈ ಮನೆ, ರಾಜ್ಯ ಹಾಗೂ ತಮಿಳುನಾಡಿಗೆ ಜೀವಜಲ ನೀಡುವ ಕೊಡಗನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ಎ.ಎಸ್ ಪೊನ್ನಣ್ಣ ನವರಿಗೆ ಸಚಿವ ಸ್ಥಾನ ಸಿಗದ ಪರಿಣಾಮ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಗಣೇಶ್ ಪರಮಲೆ ಅವರು, ಆನೆ-ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಪರಿಹಾರಕ್ಕೆ ಜಿಲ್ಲೆಯ ಸಚಿವರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ದೀಪಕ್, ಪ್ರದೀಪ್ ಕುಮಾರ್, ಮೋಹಿನಿ, ಸಹ ಕಾರ್ಯದರ್ಶಿ ರಿತಿನ್ ಡೆಮ್ಮಲೆ ಉಪಸ್ಥಿತರಿದ್ದರು.











































