ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಗಾಂಧಿ ಕುಟುಂಬವನ್ನು ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ ಎಂದು ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾಟಿಯಾ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದಿದ್ದು, ರಾಜಕೀಯ ದ್ವೇಷದ ಕಾಂಗ್ರೆಸ್ ನಾಯಕರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ಒಂದು ದಿನದ ಬಳಿಕ ಬಿಜೆಪಿ ನಾಯಕರ ಈ ಹೇಳಿಕೆ ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನ್ಯಾಯಾಲಯದ ತೀರ್ಪನ್ನು ಕ್ಲೀನ್ ಚಿಟ್ ಎಂದು ಬಿಂಬಿಸುವ ಮೂಲಕ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ, ಈ ಆದೇಶವು ಆರೋಪಗಳ ಅರ್ಹತೆಯ ಮೇಲೆ ಅಲ್ಲ, ಕಾನೂನು ಮತ್ತು ತಾಂತ್ರಿಕ ಆಧಾರದ ಮೇಲೆ ನೀಡಲಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಟೀಕಿಸಿದರು.ಈ ಹಿಂದೆ ಅನೇಕ ಬಾರಿ ನ್ಯಾಯಾಲಯಗಳ ಮೊರೆ ಹೋದರು ಗಾಂಧಿ ಕುಟುಂಬಕ್ಕೆ ಯಾವುದೇ ರೀತಿಯ ಕಾನೂನು ಪರಿಹಾರ ಸಿಕ್ಕಿಲ್ಲ, ಆದ್ದರಿಂದ ಈ ಪ್ರಕರಣವು ಕಾನೂನಿನಲ್ಲಿ ಆಳವಾಗಿ ಬೇರೂರಿದೆ ಹೊರತು ಬಿಜೆಪಿಯಿಂದ ನಡೆಸಲ್ಪಡುತ್ತಿಲ್ಲ ಎಂದರು. ನಿಗದಿತ ಅಪರಾಧಕ್ಕಾಗಿ ಎಫ್ಐಆರ್ ದಾಖಲಿಸದೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ಮುಂದುವರಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಇದು ಇತರ ಸಂಸ್ಥೆಗಳು ತಮ್ಮ ತನಿಖೆಯನ್ನು ಮುಂದುವರಿಸುವುದನ್ನು ತಡೆಯುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಅಮಿತ್ ಷಾಗೆ ಕಪಾಳಮೋಕ್ಷ ಎಂದ ಖರ್ಗೆ
ಯಾವುದೇ ದೃಢ ಆಧಾರವಿಲ್ಲದೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಹಿರಿಯ ವ್ಯಕ್ತಿಗಳನ್ನು ಕಿರುಕುಳ ನೀಡಲು ಇಡಿ ಮತ್ತು ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಖರ್ಗೆ, ಗಾಂಧಿ ಕುಟುಂಬವನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ಅಸ್ತ್ರಗಳಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದರು. ನ್ಯಾಯಾಲಯದ ಈ ತೀರ್ಪಿನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾಗೆ ಕಪಾಳಮೋಕ್ಷವಾಗಿದೆ ಎಂದು ಖರ್ಗೆ ಹೇಳಿದರು.
ನ್ಯಾಯಾಲಯ ಹೇಳಿದ್ದೇನು.?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದ್ದು, ಪೂರ್ವಭಾವಿ ಅಪರಾಧಕ್ಕಾಗಿ ಎಫ್ಐಆರ್ ದಾಖಲಿಸದೆ ಪಿಎಂಎಲ್ಎ ಪ್ರಕ್ರಿಯೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಜಾರಿ ನಿರ್ದೇಶನಾಲಯದ ಪ್ರಕರಣವು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರು ಮತ್ತು 2014 ರ ಸಮನ್ಸ್ ಆದೇಶವನ್ನು ಆಧರಿಸಿದೆ ಹೊರತು ಯಾವುದೇ ಔಪಚಾರಿಕ ಎಫ್ಐಆರ್ ಆಧರಿಸಿಲ್ಲ ಎಂದು ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ED ಆರೋಪಗಳು
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ನೀಡಿದ ದೂರಿನಿಂದ ಆರಂಭವಾದ ಈ ತನಿಖೆಯು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಆಸ್ತಿಗಳ ದುರುಪಯೋಗದ ಆರೋಪವನ್ನು ಗುರಿಯಾಗಿಸಿಕೊಂಡಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ 38 ಪ್ರತಿಶತ ಷೇರುಗಳನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಸಾಲಗಳನ್ನು ಬಳಸಿಕೊಂಡು 50 ಲಕ್ಷ ರೂ.ಗೆ 2,000 ಕೋಟಿ ರೂ.ಗೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ, ಇದರಲ್ಲಿ ನಕಲಿ ಬಾಡಿಗೆ ರಶೀದಿಗಳು ಮತ್ತು ನಕಲಿ ವಹಿವಾಟುಗಳು ಸೇರಿವೆ ಎನ್ನುವುದು ಇಡಿ ಆರೋಪ













































