ಅಡಿಕೆ ಬೆಳೆಗಾರರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ರಾಜ್ಯ ಸರ್ಕಾರ: ಸಮೀಕ್ಷೆಯೂ ಇಲ್ಲ, ಪರಿಹಾರವೂ ಇಲ್ಲ : ಕಿಶೋರ್ ಕುಮಾರ್ ಪುತ್ತೂರು

Picture of Savistara

Savistara

Bureau Report

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಜೀವನಾಡಿಯಾಗಿರುವ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ನಶಿಸಿ ಹೋಗುತ್ತಿದೆ. ಸ್ವತಃ ನಾನೊಬ್ಬ ಅಡಿಕೆ ಬೆಳೆಗಾರನಾಗಿ ರೈತರ ಕಣ್ಣೀರಿನ ಆಳವನ್ನು ಬಲ್ಲೆನು. ತೋಟಗಳು ಕಣ್ಣೆದುರೇ ಒಣಗಿ ಹೋಗುತ್ತಿರುವಾಗ ಕೃಷಿಕರ ಸಂಕಟದ ಅರಿವಿಲ್ಲದ ಈ ಸರ್ಕಾರ, ಅಧಿವೇಶನದಲ್ಲಿ ನೀಡಿದ ಉತ್ತರ ಅಕ್ಷರಶಃ ಅಡಿಕೆ ಬೆಳೆಗಾರರಿಗೆ ಮಾಡಿದ ದ್ರೋಹವಾಗಿದೆ. ವಿಧಾನ ಪರಿಷತ್ತಿನಲ್ಲಿ ಅಡಿಕೆ ರೋಗ ಬಾಧೆಯ ಕುರಿತು ನಾನು ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವರು ನೀಡಿರುವ ಉತ್ತರ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಸರ್ಕಾರಕ್ಕೆ ಸಮಯವಿಲ್ಲವೇ? ರಾಜ್ಯದಲ್ಲಿ ರೋಗದ ತೀವ್ರತೆ ಎಷ್ಟಿದೆ ಎಂದು ಕೇಳಿದರೆ, “ಎಲೆಚುಕ್ಕಿ ರೋಗದ ಕುರಿತು ಸಮೀಕ್ಷೆ ನಡೆಸಲಾಗಿರುವುದಿಲ್ಲ” ಎಂದು ಸರ್ಕಾರ ಲಿಖಿತ ಉತ್ತರ ನೀಡಿದೆ. ಸಾವಿರಾರು ಹೆಕ್ಟೇರ್ ತೋಟ ನಾಶವಾಗುತ್ತಿದ್ದರೂ, ಕನಿಷ್ಠ ತೋಟಕ್ಕೆ ಇಳಿದು ಸಮೀಕ್ಷೆ ನಡೆಸುವ ಸೌಜನ್ಯವನ್ನೂ ಈ ಸರ್ಕಾರ ತೋರಿಲ್ಲದಿರುವುದು ರೈತ ಸಮುದಾಯಕ್ಕೆ ಬಗೆದ ಅಪಮಾನ.ಅಂಕಿ-ಅಂಶಗಳೇ ಭಯಾನಕವಾಗಿವೆ! ಸಮೀಕ್ಷೆ ನಡೆಸದಿದ್ದರೂ, ಕೇವಲ ಕಣ್ಣಂದಾಜಿನ ಪ್ರಕಾರವೇ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 20,830 ಹೆಕ್ಟೇರ್ ಪ್ರದೇಶ ಹಳದಿ ರೋಗಕ್ಕೆ ತುತ್ತಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಇಡೀ ರಾಜ್ಯದಲ್ಲಿ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ತೋಟ ಬಾಧಿತವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಸರ್ಕಾರ ಮಾತ್ರ ಇನ್ನೂ ನಿದ್ರೆಯಲ್ಲಿದೆ.ಅಡಿಕೆ ಉಳಿಸುವ ಬದಲು ಕಾಫಿ ಬೆಳೆಯಿರಿ ಎನ್ನುತ್ತಿದೆ ಸರ್ಕಾರ! ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದು ಅಡಿಕೆ ಉಳಿಸಿ ಎಂದು ನಾವು ಕೇಳಿದರೆ, ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಭಾಗಗಳಲ್ಲಿ ಅಡಿಕೆ ಬದಲು ಕಾಫಿ ಬೆಳೆಯಿರಿ ಎಂದು ಸರ್ಕಾರ ಸಲಹೆ ನೀಡುತ್ತಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಅಲ್ಲವೇ? ನಮಗೆ ಬೇಕಿರುವುದು ನಮ್ಮ ಸಾಂಪ್ರದಾಯಿಕ ಅಡಿಕೆ ಕೃಷಿಯ ರಕ್ಷಣೆಯೇ ಹೊರತು, ಪಲಾಯನವಾದದ ಸಲಹೆಗಳಲ್ಲ.ಕೇವಲ ಬೆಳೆ ವಿಮೆ ಮತ್ತು ಅಲ್ಪಸ್ವಲ್ಪ ಸಂಶೋಧನಾ ಅನುದಾನದ ಹೆಸರಿನಲ್ಲಿ ಕೈತೊಳೆದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ರೋಗದಿಂದ ಸಂಪೂರ್ಣ ತೋಟ ಕಳೆದುಕೊಂಡ ರೈತರಿಗೆ ಎಕರೆಗೆ ಇಂತಿಷ್ಟು ಎಂದು “ವಿಶೇಷ ಪರಿಹಾರ ಪ್ಯಾಕೇಜ್” ಘೋಷಣೆ ಮಾಡಲೇಬೇಕು.

ಈ ಸರ್ಕಾರದ ಕಣ್ಣೊರೆಸುವ ತಂತ್ರಗಳಿಗೆ ನಾವು ಬಲಿಯಾಗುವುದಿಲ್ಲ. ಅಡಿಕೆ ಬೆಳೆಗಾರನ ಮಗನಾಗಿ, ನಿಮ್ಮ ಧ್ವನಿಯಾಗಿ ಸದನದ ಒಳಗೆ ಮತ್ತು ಹೊರಗೆ ಈ ಸರ್ಕಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ರೈತರಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ. ಇಂದು ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು.

[t4b-ticker]
error: Content is protected !!