ಬೇರೊಬ್ಬರ ಕೈಲಿ ಪರೀಕ್ಷೆ ಬರೆಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ವರ್ಷಗಳ ಬಳಿಕ ಸಿಕ್ಕಿಬಿದ್ದ 7 ನೌಕರರು! ಹೇಗೆ?

Picture of Savistara

Savistara

Bureau Report

ಬೆಂಗಳೂರು: ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಮಂಡಳಿಯ (ಐಸಿಎಫ್‌ಆರ್‌ಇ) ಮರ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯಲ್ಲಿ ಅಕ್ರಮ ಮಾರ್ಗದಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಗಳ ಕಾಲ ಸಂಬಳ ಎಣಿಸಿಕೊಂಡಿದ್ದ 7 ಮಂದಿ ನೌಕರರ ಉದ್ಯೋಗಕ್ಕೆ ಸಂಚಕಾರ ಬಂದಿದೆ.

‘ಮುನ್ನಾಭಾಯ್ ಎಂಬಿಬಿಎಸ್’ ಸಿನಿಮಾ ಮಾದರಿಯಲ್ಲಿಪರೀಕ್ಷೆಯನ್ನು ಬೇರೊಬ್ಬರ ಕೈಲಿ ಬರೆಸಿ ಅಂಕ ಗಿಟ್ಟಿಸಿಕೊಂಡು ಕೆಲಸಕ್ಕೆ ಸೇರಿದ್ದ ಏಳು ಮಂದಿಯ ನಕಲಿತನವನ್ನು ಐಸಿಎಫ್‌ಆರ್‌ಇ ಸಂಸ್ಥೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜತೆಗೆ, ನಕಲಿ ದಾಖಲೆ ಸಲ್ಲಿಸಿ ವಂಚಿಸಿದ್ದ ನೌಕರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರ ಬೆನ್ನಲ್ಲೇ ಮಲ್ಲೇಶ್ವರದಲ್ಲಿರುವ ಐಸಿಎಫ್‌ಆರ್‌ಇನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಆಗಿದ್ದ ಹರಿಯಾಣ ಮೂಲದ ದಿನೇಶ್ (28), ಎಚ್‌.ಎನ್. ಸುಧೀರ್ (29), ಪ್ರಿನ್ಸ್ (29), ಸೋನು (37), ಪ್ರವೀಣ್ (25), ಬಿಹಾರದ ರಾಜ್‌ಕುಮಾ‌ರ್ (25), ಅರಣ್ಯ ವೀಕ್ಷಕ ಸುನಿಲ್‌ ಕುಮಾರ್ ಯಾದವ್ (33) ವಿರುದ್ಧ ಸದಾಶಿವನಗರ ಠಾಣೆಯಲ್ಲಿಎಫ್‌ಐಆರ್ ದಾಖಲಾಗಿದೆ.

ಏಳು ಮಂದಿ ತಲೆಮರೆಸಿಕೊಂಡಿದ್ದಾರೆ!

ಆರೋಪಿಗಳ ಪೈಕಿ ದಿನೇಶ್ 2019ರಲ್ಲಿ ಎಂಟಿಎಸ್ ಆಗಿ ನೇಮಕಗೊಂಡಿದ್ದರು. ಸುನಿಲ್ ಕುಮಾ‌ರ್ ಯಾದವ್ 2023ರಲ್ಲಿಉದ್ಯೋಗಕ್ಕೆ ಸೇರಿದ್ದರು. ಉಳಿದವರು 2022ರಲ್ಲಿನೇಮಕಾತಿ ಹೊಂದಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಏಳು ಮಂದಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಯಲಿಗೆ ಬಂದಿದ್ದೇಗೆ ವಂಚನೆ?2024ರಲ್ಲಿಐಸಿಎಫ್‌ಆರ್‌ಇನಲ್ಲಿಎಂಟಿಎಸ್‌ ಹುದ್ದೆಗಳಿಗೆ ನೇಮಕಗೊಂಡಿದ್ದವರ ದಾಖಲೆಗಳ ನೈಜತೆ ಪರಿಶೀಲಿಸಿದಾಗ ನಾಲ್ವರ ದಾಖಲೆಗಳು ನಕಲಿಯಾಗಿದ್ದವು. ಜತೆಗೆ, ನಾಲ್ವರ ಹೆಸರಿನಲ್ಲಿ ಬೇರೆಯವರು ಲಿಖಿತ ಪರೀಕ್ಷೆ ಬರೆದಿದ್ದ ಘಾತುಕ ವಿಚಾರ ಬಯಲಿಗೆ ಬಂದಿತ್ತು. ಇದಕ್ಕೆ ಸಂಬಂಧಿಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಸಾಕ್ಷಿಯೂ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿಸದಾಶಿವನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿ ವಂಚನೆ ಎಸಗಿದ್ದ ಬಿಹಾರ ಮೂಲದ ರೂಪೇಶ್‌ಕುಮಾರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ಎಫ್‌ಎಸ್‌ಎಲ್ ವರದಿ ಸುಳಿವು

ವಾಮಮಾರ್ಗದಲ್ಲಿಕೆಲಸಕ್ಕೆ ನೇಮಕಗೊಂಡ ವಿಚಾರದ ಬಳಿಕ ಎಚ್ಚೆತ್ತ ಐಸಿಎಫ್‌ಆರ್‌ಇ ಕಾರ್ಯದರ್ಶಿಯು ಮರವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಗಳಲ್ಲಿಎಂಟಿಎಸ್ ಹಾಗೂ ಇತರ ಹುದ್ದೆಗಳಿಗೆ ನೇಮಕಗೊಂಡವರ ದಾಖಲೆ ಪರಿಶೀಲಿಸುವಂತೆ ತಾಕೀತು ಮಾಡಿದ್ದರು. ಈ ನಿಟ್ಟಿನಲ್ಲಿಉದ್ಯೋಗಿಗಳ ಕುರಿತು ಆಂತರಿಕ ತನಿಖೆ ನಡೆಸಿದಾಗ ದಿನೇಶ್‌, ಎಚ್.ಎನ್. ಸುಧೀರ್, ಪ್ರಿನ್ಸ್, ಸೋನು, ಪ್ರವೀಣ್, ರಾಜ್‌ಕುಮಾರ್, ಸುನಿಲ್ ಕುಮಾ‌ರ್ ಯಾದವ್ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

ಏಳು ಮಂದಿಯ ಪ್ರತಿನಿತ್ಯ ಕರ್ತವ್ಯಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿನ ಸಹಿಗಳಿಗೂ, ಲಿಖಿತ ಪರೀಕ್ಷೆ ದಿನ ಮಾಡಿದ ಸಹಿಗಳಿಗೂ ತಾಳೆ ಆಗುತ್ತಿರಲಿಲ್ಲ. ಹೀಗಾಗಿ, ಏಳು ಮಂದಿಯು ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ದಿನಗಳ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ ಇವರ ಬದಲಿಗೆ ಬೇರೊಬ್ಬರು ಪರೀಕ್ಷೆಗೆ ಹಾಜರಾಗಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿಏಳು ಮಂದಿಯ ದಾಖಲೆಗಳು ಹಾಗೂ ಪರೀಕ್ಷೆಗೆ ಹಾಜರಾಗಿದ್ದ ದಿನದ ಉತ್ತರಪತ್ರಿಕೆ, ಸಹಿಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್)ಕಳಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆ ನಡೆಸಿದ್ದ ಎಫ್‌ಎಸ್‌ಎಲ್ ತಜ್ಞರು ಏಳು ಮಂದಿಯ ದಾಖಲೆಗಳಲ್ಲಿ ವ್ಯತ್ಯಾಸ ಇರುವುದನ್ನು ದೃಧಿಢಪಡಿಸಿದ್ದರು. ಈ ನಿಟ್ಟಿನಲ್ಲಿ ಐಸಿಎಫ್‌ಆರ್‌ಇ ನಿರ್ದೇಶಕ ಡಾ. ಶಕ್ತಿ ಸಿಂಗ್ ಚವ್ಹಾಣ್ ದೂರು ನೀಡಿದ್ದು, ಏಳು ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

[t4b-ticker]
error: Content is protected !!