ದೇವನಹಳ್ಳಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿಮುಂದುವರೆದಿದ್ದು, ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮತ್ತು ನಿರ್ಗಮಿಸಬೇಕಿದ್ದ 34 ಅಂತರ ರಾಷ್ಟ್ರೀಯ ವಿಮಾನ ಹಾರಾಟ ರದ್ದಾಗಿದೆ.
ಬುಧವಾರ ಬೆಳಗ್ಗೆ 11.59ರವರೆಗೆ ಇಲ್ಲಿಗೆ ಬರಬೇಕಿದ್ದ 18 ಹಾಗೂ 16 ನಿರ್ಗಮಿಸಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ. ಇದರಿಂದ ಬೆಂಗಳೂರು, ಅಬುಧಾಬಿ, ರಿಯಾದ್, ಜೆಡ್ಡಾ, ದಮಾಮ್, ದುಬೈ ಹಾಗೂ ದೋಹಾ ನಗರಗಳ ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ.ಪ್ರಯಾಣಿಕರ ನೆರವಿಗಾಗಿ ಟರ್ಮಿನಲ್-2ರ ಹೊರಭಾಗದಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ತಿಳಿಸಿದೆ.ಈ ಸಹಾಯ ಕೇಂದ್ರದಲ್ಲಿ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರ, ಸಂದೇಹ ಪರಿಹಾರ, ಸಾರಿಗೆ ವ್ಯವಸ್ಥೆ, ತುರ್ತು ಸೇವೆ ಸೇರಿದಂತೆ ವಿವಿಧ ನೆರವು ನೀಡಲಾಗುತ್ತಿದೆ. ವಿವಿಧ ವಿಮಾನ ಕಂಪನಿಗಳ ಪ್ರತಿನಿಧಿಗಳು ಆಗಮಿಸುವವರೆಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಸೌಕರ್ಯಕ್ಕಾಗಿ ಕುರ್ಚಿಗಳು, ಕುಡಿಯುವ ನೀರು, ತಿಂಡಿಗಳು, ವೈದ್ಯಕೀಯ ಸಹಾಯ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ವೀಲ್ಚೇರ್ ಹಾಗೂ ಮಕ್ಕಳಿಗೆ ತಾತ್ಕಾಲಿಕ ಆಹಾರ ವ್ಯವಸ್ಥೆಯಂತಹ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.
ಕೋಲ್ಕತ್ತ: 5 ವಿಮಾನಗಳ ಹಾರಾಟ ಸ್ಥಗಿತ
ಕೋಲ್ಕತ್ತ ವಿಮಾನ ನಿಲ್ದಾಣದಿಂದ ಪಶ್ಚಿಮ ಏಷ್ಯಾಕ್ಕೆ ತೆರಳಬೇಕಿದ್ದ ಮತ್ತು ಅಲ್ಲಿಂದ ಬರಬೇಕಿದ್ದ ಐದು ವಿಮಾನಗಳ ಸಂಚಾರ ವನ್ನು ಬುಧವಾರ ರದ್ದುಗೊಳಿಸಲಾಗಿದೆ. ದೋಹಾ, ದುಬೈ, ಅಬುಧಾಬಿಗೆ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ರದ್ದಾಗಿದೆ.













































