ಬಜೆಟ್ | ಕ್ವಾಂಟಮ್ ರೋಡ್‌ ಮ್ಯಾಪ್‌ಗೆ ₹ 10 ಕೋಟಿ ಘೋಷಣೆ: ಸಚಿವ ಬೋಸರಾಜು

Picture of Savistara

Savistara

Bureau Report

ಬೆಂಗಳೂರು: ‘ಕ್ವಾಂಟಮ್ ರೋಡ್‌ಮ್ಯಾಪ್‌ನ ಅನುಷ್ಠಾನಕ್ಕೆಬಜೆಟ್‌ನಲ್ಲಿ ₹ 10 ಕೋಟಿ ಘೋಷಿಸಿರುವುದು, ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಕ್ಷೇತ್ರದ ಕೇಂದ್ರವಾಗಿ ಮಾಡುವ ಹಾದಿಯಲ್ಲಿ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

‘ಬೆಂಗಳೂರು ‘ಕ್ವಾಂಟಮ್ ಶೃಂಗಸಭೆ’ಯಲ್ಲಿ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ₹ 1 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಮೊದಲ ಹಂತದ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅವರು ₹ 10 ಕೋಟಿ ನೀಡಿದ್ದಾರೆ. ಭವಿಷ್ಯದ ಈ ವಲಯವನ್ನು ಮುಂದಿನ ಐದು ವರ್ಷಗಳಲ್ಲಿ ಮುನ್ನಡೆಸಲು ಅಗತ್ಯವಿರುವ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವತ್ತ ಈ ರೋಡ್‌ಮ್ಯಾಪ್ ಗಮನ ಹರಿಸಲಿದೆ’ ಎಂದಿದ್ದಾರೆ.’ಬೆಂಗಳೂರು ನಗರವು ಈಗಾಗಲೇ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ನವೋದ್ಯಮಗಳ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಅಗತ್ಯ ಮೂಲಸೌಕರ್ಯ ಮತ್ತು ನೀತಿಯನ್ನು ರೂಪಿಸುವ ಮೂಲಕ 2035ರ ವೇಳೆಗೆ ಶೇ 20ರಷ್ಟು ಜಾಗತಿಕ ಮಾರುಕಟ್ಟೆ ಪಾಲನ್ನು ಸಾಧಿಸುವ ರಾಜ್ಯ ಸರ್ಕಾರದ ದೃಷ್ಟಿಕೋನಕ್ಕೆ ಈ ಬದ್ಧತೆಯು ಮತ್ತಷ್ಟು ಬಲ ತುಂಬಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

`ಕ್ವಾಂಟಮ್ ಸಿಟಿ ನಿರ್ಮಾಣಕ್ಕಾಗಿ ಹೆಸರಘಟ್ಟದಲ್ಲಿ ಈಗಾಗಲೇ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಐಐಎಸ್‌ಸಿಯಂತಹ ವಿಶ್ವದರ್ಜೆಯ ಸಂಸ್ಥೆಗಳು, ಸುಧಾರಿತ ಕ್ವಾಂಟಮ್ ಕಂಪ್ಯೂಟರ್‌ಗಳ ಲಭ್ಯತೆ ಮತ್ತು ನಮ್ಮ ರಾಜ್ಯದ ತಾಂತ್ರಿಕ ಮಾನವ ಸಂಪನ್ಮೂಲದಿಂದಾಗಿ, ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಅಭೂತಪೂರ್ವ ಪ್ರಗತಿಗೆ ಸಾಕ್ಷಿಯಾಗಲಿದೆ’ ಎಂದಿದ್ದಾರೆ.

[t4b-ticker]
error: Content is protected !!