ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೋಲ್ಕತ್ತಾದಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ವೈದ್ಯೆಯ ತಾಯಿ, ಬಿಜೆಪಿ ಅಭ್ಯರ್ಥಿ ರತ್ನ ದೇವನಾಥ್ ಅವರು ಪಾನಿಹಾಟಿ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಆರಂಭಿಕ ಹಂತದಲ್ಲಿ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ತೀರ್ಥಂಕರ್ ಘೋಷ್ ಮುನ್ನಡೆ ಸಾಧಿಸಿದ್ದರೂ, ಇದೀಗ ರತ್ನ ದೇವನಾಥ್ ಅವರು ಮುನ್ನಡೆ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫಲಿತಾಂಶವು ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ನ್ಯಾಯಕ್ಕಾಗಿ ಹೋರಾಟ: ಚುನಾವಣಾ ಅಖಾಡದಲ್ಲಿ ಸಂತ್ರಸ್ತೆಯ ತಾಯಿ
ತಮ್ಮ ಮಗಳಿಗೆ ನಡೆದ ಅನ್ಯಾಯಕ್ಕೆ ಮತ್ತು ರಾಜ್ಯದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಖಂಡಿಸಿ ರತ್ನ ದೇವನಾಥ್ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನೇರ ಸಮರ ಸಾರಿದ್ದರು. “ಮಹಿಳಾ ಸುರಕ್ಷತೆ”ಯನ್ನೇ ಪ್ರಮುಖ ಅಜೆಂಡಾವನ್ನಾಗಿಸಿಕೊಂಡು ಬಿಜೆಪಿ ಟಿಕೆಟ್ನಲ್ಲಿ ಕಣಕ್ಕಿಳಿದಿದ್ದ ಅವರಿಗೆ ಮತದಾರರು ಸದ್ಯ ಸಾಥ್ ನೀಡುತ್ತಿದ್ದಾರೆ.
ಇತಿಹಾಸದತ್ತ ಬಿಜೆಪಿ: 192 ಸ್ಥಾನಗಳಲ್ಲಿ ಮುನ್ನಡೆ ಪಶ್ಚಿಮಬಂಗಾಳದಲ್ಲಿ ಈ ಬಾರಿ ಬಿಜೆಪಿ ಐತಿಹಾಸಿಕ ಸಾಧನೆಯತ್ತ ಹೆಜ್ಜೆ ಹಾಕುತ್ತಿದೆ. ತೃಣಮೂಲ ಕಾಂಗ್ರೆಸ್ 99 ಸ್ಥಾನಗಳಿಸಿದೆ.
ಬಂಗಾಳದ ಇತಿಹಾಸದಲ್ಲಿ ಈವರೆಗೆ ಅಧಿಕಾರ ಹಿಡಿಯದ ಬಿಜೆಪಿ, ಈ ಬಾರಿ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನುಗ್ಗುತ್ತಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ.
ಆರ್ಜಿ ಕರ್ ಪ್ರಕರಣದ ಕಿಚ್ಚು
ಆರ್ಜಿ ಕರ್ ಆಸ್ಪತ್ರೆಯ ಆವರಣದಲ್ಲೇ ಯುವ ವೈದ್ಯೆಯ ಮೇಲೆ ನಡೆದ ಕೃತ್ಯದ ವಿರುದ್ಧ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಭಟನಾಕಾರರ ಮೇಲೆ ಸರ್ಕಾರ ಮತ್ತು ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಈ ಚುನಾವಣೆ ನಡೆದಿತ್ತು. ಇದೀಗ ಸಂತ್ರಸ್ತೆಯ ತಾಯಿಯ ಮುನ್ನಡೆಯು ಆಡಳಿತಾರೂಢ ಟಿಎಂಸಿಗೆ ನೈತಿಕ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.










































