ಜಬಲ್ಪುರ: ನರ್ಮದಾ ನದಿಯ ಬಾರ್ಗಿ ಅಣೆಕಟ್ಟಿನಲ್ಲಿ ಪ್ರವಾಸಿಗರ ಬೋಟ್ ಮಗುಚಿದ ಪ್ರಕರಣದಲ್ಲಿ 9 ಮಂದಿ ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾದ ಘಟನೆ ಎ. 30 ರಂದು ಸಂಭವಿಸಿತ್ತು.ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಬ್ಬಳು ತನ್ನ ತೋಳುಗಳಲ್ಲಿ ಮಗುವನ್ನು ಬಿಗಿದಪ್ಪಿ ಇಬ್ಬರೂ ಮೃತಪಟ್ಟು ತೇಲುತ್ತಿರುವ ಹಾಗಿರುವ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ಈ ಚಿತ್ರ ಕಲ್ಲೆದೆಯನ್ನೂ ಕರಗಿಸುವಷ್ಟು ನೋವಿನಿಂದ ಕೂಡಿತ್ತು.ಈ ಚಿತ್ರ ಜಬಲ್ಪುರ ದುರಂತದಲ್ಲಿ ಮಡಿದ ತಾಯಿ ಮಗುವಿನದ್ದು ಎಂದು ಹೇಳಲಾಗಿತ್ತು. ಆದರೆ ಇದನ್ನು ಸ್ವತಃ ಜಬಲ್ಪುರ ಜಿಲ್ಲಾಧಿಕಾರಿಯೇ ಅಲ್ಲಗಳೆದು, ಪೋಸ್ಟ್ ಮಾಡಿದ್ದು, ಇದೊಂದು ಎಐ ನಿರ್ಮಿತ ಚಿತ್ರವಾಗಿದ್ದು, ನಿಜವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಘಟನೆಯಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದ ಮುಳುಗು ತಜ್ಞರೊಬ್ಬರು ತಾಯಿಯ ತೋಳುಗಳಲ್ಲಿದ್ದ ಮಗುವನ್ನು ನೋಡಿ ಆಘಾತವಾಯಿತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಈ ವಿಷಯ ಸತ್ಯ. ಆದರೆ ಆ ಚಿತ್ರ ಎಐ ನಿರ್ಮಿತವಾಗಿದ್ದು, ನಿಜವಲ್ಲ ಎಂದು ಹೇಳಿದ್ದಾರೆ.










































