ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ ಬಂಡಾಯ ಅಭ್ಯರ್ಥಿ ಗೆಲುವು

Picture of Savistara

Savistara

Bureau Report

ಮುಂಬೈ : ನಾಸಿಕ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಶಿವಸೇನೆ (ಶಿಂದೆ ಬಣದ) ಅಧಿಕೃತ ಅಭ್ಯರ್ಥಿ ನರೇಂದ್ರ ದರಾಡೆ ಅವರನ್ನು ಬಿಜೆಪಿಯ ಬಂಡಾಯ ಅಭ್ಯರ್ಥಿ ಗೋಕುಲ್ ಗೀತೆ ಮಣಿಸಿದ್ದಾರೆ.

ಮೇಲ್ಮನೆಯ 11 ಕ್ಷೇತ್ರಗಳಿಗೆ ಜೂನ್ 18ರಂದು ಮತದಾನ ನಡೆದಿತ್ತು. ಸೋಮವಾರ ನಡೆದ ಮತ ಎಣಿಕೆಯಲ್ಲಿ ಗೋಕುಲ್ ಅವರು 357 ಮತಗಳನ್ನು ಪಡೆದಿದ್ದು, ನರೇಂದ್ರ ಅವರು 248 ಮತಗಳನ್ನಷ್ಟೇ ಪಡೆದು 199 ಮತಗಳಿಂದ ಸೋಲು ಅನುಭವಿಸಿದ್ದಾರೆ ಎಂದು ಚುನಾವಣಾಧಿಕಾರಿಯು ತಿಳಿಸಿದ್ದಾರೆ.ಗೀತೆ ಅವರ ಗೆಲುವು ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದೆ. ಮೈತ್ರಿ ಸರ್ಕಾರದ ಅಭ್ಯರ್ಥಿ ಪ್ರಬಲ ಸ್ಪರ್ಧೆಯೊಡ್ಡಬಹುದೆಂಬ ನಿರೀಕ್ಷೆಯು ಹುಸಿಯಾಗಿದೆ.ನರೇಂದ್ರ ದರಾಡೆ ಅವರು ಏಕನಾಥ ಶಿಂದೆ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಶಿವಸೇನೆ (ಉದ್ದವ್ ಬಣ)ದ ಆರು ಮಂದಿ ಲೋಕಸಭಾ ಸದಸ್ಯರು ಬಂಡಾಯವೆದ್ದು, ಶಿಂದೆ ಬಣಕ್ಕೆ ಸೇರಿದ್ದಾರೆ. ಅದರ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.

ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಏಕನಾಥ ಶಿಂದೆ ಹಾಗೂ ಪಕ್ಷದ ಹಲವು ಶಾಸಕರು ವ್ಯಾಪಕ ಪ್ರಚಾರ ನಡೆಸಿದ್ದರು.ಫಲಿತಾಂಶದ ಕುರಿತಂತೆ ವಿಧಾನ ಪರಿಷತ್‌ನ ಶಿವಸೇನೆಯ ಸದಸ್ಯ ಮನೀಶಾ ಕಯಾಂಡೆ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.“ನಮ್ಮ ಅಭ್ಯರ್ಥಿಯನ್ನು ಮೈತ್ರಿ ನಾಯಕರು ಪೂರ್ಣವಾಗಿ ಬೆಂಬಲಿಸಿದ್ದರೂ ಕೂಡ ಗೋಕುಲ್ ಗೆಲುವು ಸಾಧಿಸಿರುವುದು ಅನುಮಾನ ಮೂಡಿಸಿದೆ’ ಎಂದು ಫಲಿತಾಂಶದ ಬಳಿಕ ಅಸಮಾಧಾನ ವ್ಯಕ್ತಪಡಿಸಿದರು.ಗೋಕುಲ್ ಗೀತೆ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಸಚಿವ ಗಿರೀಶ್ ಮಹಾಜನ್ ಅವರು ನಾಮಪತ್ರ ಹಿಂತೆಗೆಯುವಂತೆ ಮನವೊಲಿಸಿದ್ದರು.ನಾಮಪತ್ರ ಹಿಂತೆಗೆಯುವ ಅವಧಿ ಮುಗಿದಿದ್ದರಿಂದ, ಮತ ಪತ್ರದಲ್ಲಿ ಅವರ ಹೆಸರು ಉಳಿದಿತ್ತು. ಆದರೆ, ತಮ್ಮ ಪರವಾಗಿ ಪ್ರಚಾರವನ್ನು ಸ್ಥಗಿತಗೊಳಿಸಿದ್ದರು. ಹೀಗಿದ್ದರೂ ಗೆಲುವು ಪಡೆದು, ಆಡಳಿತರೂಢ ಮಿತ್ರಪಕ್ಷಗಳಿಗೆ ಆಘಾತ ನೀಡಿದ್ದಾರೆ.

‘ಮಹಾಯುತಿ’ಗೆ 16 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು: ವಿಧಾನ ಪರಿಷತ್‌ನ 17 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಗೆಲುವು ಪಡೆದುಕೊಂಡಿದೆ. ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದು ಶಿವಸೇನೆ (ಶಿಂದೆ) ಮೂರು ಕ್ಷೇತ್ರ ಹಾಗೂ ಎನ್‌ಸಿಪಿ (ಅಜಿತ್ ಪವಾರ್) 2 ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ. ಉಳಿದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತದಾನಕ್ಕೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು.

[t4b-ticker]
error: Content is protected !!