ಬೆಳಗಾವಿ: ಇಲ್ಲಿನ ಅಬಕಾರಿ ಹೆಚ್ಚುವರಿ ಆಯುಕ್ತ,ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಭಾಮೈದ ವೈ.ಮಂಜುನಾಥ ಮನೆಗಳು ಹಾಗೂ ಬೇರೆಬೇರೆ ಊರಿನಲ್ಲಿ ಇರುವ ಅವರ ಆಪ್ತರ ಮನೆಗಳ ಮೇಲೆ ಬುಧವಾರ ನಸುಕಿನಿಂದಲೇ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮವಾಗಿ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಬೆಳಗಾವಿಯ ಹನುಮಾನ್ ನಗರದ ಮನೆ, ಜಿಲ್ಲೆಯ ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ ಸ್ನೇಹಿತರ ಮನೆ, ಬೆಂಗಳೂರಲ್ಲಿರುವ ಮಂಜುನಾಥಗೆ ಸೇರಿದ ಅಪಾರ್ಟೆಂಟ್, ಮೈಸೂರು, ಅರಿಸಿಕೆರೆಯಲ್ಲಿರುವ ಆಪ್ತರ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಅಕ್ರಮ ಸಂಪಾದನೆ, ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳ ದಾಖಲೆ, ಜಮೀನು, ಬಾರ್ ಅಂಡ್ ರೆಸ್ಟಾರೆಂಟ್ ಮುಂತಾದವುಗಳ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ದಾಳಿ ತಂಡದಿಂದ ಮಾಹಿತಿ ಸಿಕ್ಕಿದೆ.ಮಂಜುನಾಥ ಅವರು ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಭಾಮೈದ. ಸದ್ಯ ಬೆಂಗಳೂರಿನ ಅಪಾರ್ಟೆಂಟ್ನಲ್ಲಿ ಅವರು ವಾಸವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರಸೀಕೆರೆಯಲ್ಲಿ ಅಧಿಕಾರಿಗಳಿಂದ ತಪಾಸಣೆ
ಹರಪನಹಳ್ಳಿ (ವಿಜಯನಗರ ಜಿಲ್ಲೆ): ಬಳ್ಳಾರಿ-ವಿಜಯನಗರ ಕ್ಷೇತ್ರದ ಮಾಜಿ ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ಅರಸೀಕೆರೆ ಗ್ರಾಮದ ಪೊಲೀಸ್ ಠಾಣೆ ಸಮೀಪದ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ 5.30ರಿಂದ ತಪಾಸಣೆ ನಡೆಸುತ್ತಿದ್ದು, ಮಧ್ಯಾಹ್ನ 1 ಗಂಟೆಯ ಬಳಿಕವೂ ಅದು ಮುಂದುವರಿದಿದೆ.ಎರಡು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ಮನೆಯಲ್ಲಿ ದೊರೆತ ಕಾಗದಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಮನೆ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಯಾರನ್ನೂ ಮನೆ ಸಮೀಪಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ.ಇ.ಡಿ ದಾಳಿಯ ಬಗ್ಗೆ ತಾಲ್ಲೂಕಿನಲ್ಲಿ ಅಧಿಕಾರಿಗಳು ಮೌನ ವಹಿಸಿದ್ದು, ಯಾವುದೇ ಮಾಹಿತಿಯೂ ಲಭಿಸುತ್ತಿಲ್ಲ. ಮನೆಯಲ್ಲಿ ಯಾವ ಯಾವ ದಾಖಲೆಗಳು ದೊರೆತಿವೆ ಎಂಬ ಬಗ್ಗೆ ಸಹ ಮಾಹಿತಿ ದೊರೆತಿಲ್ಲ.











































