ಜಬಲ್ಪುರ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಪುತ್ರ ಕಾರ್ತಿಕೇಯ ಸಿಂಗ್ ಅವರ ಬಗ್ಗೆ ನೀಡಿದ್ದ ಮಾನಹಾನಿಕರ ಹೇಳಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಧ್ಯ ಪ್ರದೇಶದ ಹೈಕೋರ್ಟ್ಗೆ ವಿಷಾದ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ಆಗಿರುವ ರಾಹುಲ್ ಗಾಂಧಿ ವಿರುದ್ದ ಕಾರ್ತಿಕೇಯ ಸಿಂಗ್ ಭೋಪಾಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.ರಾಹುಲ್ ಗಾಂಧಿ ಪರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ, ಈ ಹೇಳಿಕೆಯು ಕಾರ್ತಿಕೇಯ ಸಿಂಗ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಉಲ್ಲೇಖಿಸಿದ್ದಾರೆ.
ಏನಿದು ಘಟನೆ?
2018ರಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪನಾಮ ಪೇಪರ್ ಸೋರಿಕೆ ಹಗರಣ ಕುರಿತು ಉಲ್ಲೇಖಿಸುವಾಗ ರಾಹುಲ್ ಗಾಂಧಿ ತಮ್ಮ ಹೆಸರನ್ನು ಆರೋಪಿಸಿದ್ದಾರೆ. ಇದರಿಂದಾಗಿ ತಮ್ಮ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಕಾರ್ತಿಕೇಯ, ಶಾಸಕರು ಹಾಗೂ ಸಂಸದರ ವಿರುದ್ಧದ ಪ್ರಕರಣಗಳಿಗಾಗಿ ಭೋಪಾಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.ನಂತರ ರಾಹುಲ್ ಗಾಂಧಿ ಅವರು ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು. ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ಗುರುವಾರ ನಡೆಯಲಿದೆ.










































