ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಲೋಹಾಗಢ ಕೋಟೆಯಲ್ಲಿ ಜೂನ್ 18ರಂದು ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರವಾಲ್ ಹತ್ಯೆ ಪ್ರಕರಣದ ರೋಮಾಂಚಕ ಸುಳಿವುಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ಕೇತನ್ನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಜಂಟಿಯಾಗಿ ಈ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ನಡೆಸಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ.ಉಪ ಪೊಲೀಸ್ ಸೂಪರಿಂಟೆಂಡೆಂಟ್ ಗಜಾನನ್ ತೋಂಪೆ ನೀಡಿರುವ ಮಾಹಿತಿ ಪ್ರಕಾರ, ಜೂನ್ 18ರಂದು ಪ್ರವಾಸದ ನೆಪದಲ್ಲಿ ಕೇತನ್ ಮತ್ತು ಸಿಯಾ ಲೋಹಾಗಢ ಕೋಟೆಯ ವಿಂಚು ಕಟಾ ಕಣಿವೆಯ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಇವರನ್ನು ಹಿಂಬಾಲಿಸಿಕೊಂಡು ಹೋಗಿದ್ದ ಪ್ರಿಯಕರ ಚೇತನ್, ಸಿಯಾ ನೀಡುವ ಸಂಕೇತಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ.’ಕೇತನ್ನನ್ನು ಪ್ರಪಾತಕ್ಕೆ ತಳ್ಳಲು ಇಬ್ಬರೂ ಸೇರಿ ಒಂದು ರಹಸ್ಯ ಸಂಕೇತವನ್ನು ನಿಗದಿಪಡಿಸಿದ್ದರು. ಅದರಂತೆ, ಕೋಟೆಯ ತುದಿಗೆ ತಲುಪಿದ ತಕ್ಷಣ ಸಿಯಾ ಅಲ್ಲಿ ಕೆಳಗೆ ಕುಳಿತಿದ್ದಾಳೆ. ಇದುವೇ ಸರಿಯಾದ ಸಮಯ ಎಂಬ ಸಂಕೇತ ಸಿಗುತ್ತಿದ್ದಂತೆ, ಹಿಂದಿನಿಂದ ರಹಸ್ಯವಾಗಿ ಬಂದ ಚೇತನ್, ಕೇತನ್ನನ್ನು ಪ್ರಪಾತಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದ’ ಎಂದು ತೋಂಪೆ ವಿವರಿಸಿದ್ದಾರೆ.
ತನ್ನ ಲೊಕೇಶನ್ ಪೊಲೀಸರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಚೇತನ್ ತನ್ನ ಮೊಬೈಲ್ ಅನ್ನು ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿರುವ ತನ್ನ ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಬದಲಿಗೆ, ತನ್ನ ಕೆಲಸಗಾರನೊಬ್ಬನ ಮೊಬೈಲ್ ಅನ್ನು ತನ್ನೊಂದಿಗೆ ತಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಕೇತನ್ ಉದ್ಯಮಿಯಾಗಿದ್ದು ಸಕ್ಸಸ್ ಗ್ರೂಪ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿದ್ದರು. ಸಿಯಾ ವಾಣಿಜ್ಯ ಪದವೀಧರೆಯಾಗಿದ್ದಾಳೆ.
6 ತಿಂಗಳಲ್ಲೇ 2 ಸಾವಿರಕ್ಕೂ ಹೆಚ್ಚು ಕರೆಗಳು..
ಇನ್ನು, ಪುಣೆ ಪೊಲೀಸ್ ಸೂಪರಿಂಟೆಂಡೆಂಟ್ ಸಂದೀಪ್ ಸಿಂಗ್ ಗಿಲ್ ಅವರು ಈ ಇಬ್ಬರ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಳೆದ ಆರು ತಿಂಗಳಲ್ಲಿ ಸಿಯಾ ಮತ್ತು ಚೇತನ್ ನಿರಂತರ ಸಂಪರ್ಕದಲ್ಲಿದ್ದರು. ಕೊಲೆ ಮಾಡುವ ಮುನ್ನ ಇವರಿಬ್ಬರು ಬರೋಬ್ಬರಿ 2,004 ಬಾರಿ ಫೋನ್ನಲ್ಲಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದಾರೆ. ಇದರಲ್ಲಿ ಕೆಲವು ಕರೆಗಳು 2 ರಿಂದ 3 ಗಂಟೆಗಳಿಗಿಂತ ಹೆಚ್ಚು ಕಾಲ ಮಾತು ಮುಂದುವರಿದಿದ್ದವು.ಘಟನೆ ನಡೆದ ದಿನದಂದೇ ಇವರಿಬ್ಬರು ಕೆಫೆಯೊಂದರಲ್ಲಿ ಭೇಟಿಯಾಗಿ ಕೊನೆಯ ಹಂತದ ಪ್ಲಾನ್ ಮಾಡಿದ್ದರು. ಕೋಟೆಯ ಯಾವ ಜಾಗದಿಂದ ತಳ್ಳಿದರೆ ಕೇತನ್ ಬದುಕುಳಿಯುವುದಿಲ್ಲ ಎಂಬುದನ್ನು ಮೊದಲೇ ಪ್ಲಾನ್ ಹಾಕಿ, ಅದರಂತೆಯೇ ಕೃತ್ಯ ಎಸಗಿದ್ದಾರೆ ಎಂದು ಗಿಲ್ ತಿಳಿಸಿದ್ದಾರೆ.
ಇನ್ನೊಂದೆಡೆ, ಆರೋಪಿ ಚೇತನ್ ಚೌಧರಿ ತಂದೆ ಬಾಬುಲಾಲ್ ಚೌಧರಿ ತನ್ನ ಮಗ ನಿರಪರಾಧಿ ಎಂದು ವಾದಿಸಿದ್ದಾರೆ. ‘ಘಟನೆ ನಡೆಯುವಾಗ ಚೇತನ್ ಅವರಿಬ್ಬರಿಗಿಂತ ಸಾಕಷ್ಟು ದೂರ ನಿಂತಿದ್ದ ಎಂದು ನಮಗೆ ತಿಳಿಯಿತು. ಸಿಯಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ನನ್ನ ಮಗನನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾಳೆ. ಆ ದಿನ ಆತ ಲೋಹಾಗಢ ಕೋಟೆಗೆ ಏಕೆ ಹೋಗಿದ್ದ ಎಂಬುದು ನಮಗೆ ತಿಳಿಯದು. ಅವರಿಬ್ಬರ ನಡುವೆ ಪ್ರೇಮ ಸಂಬಂಧವಿರುವ ಬಗ್ಗೆ ನಮಗೆ ಗೊತ್ತಿಲ್ಲ. ನನ್ನ ಮಗ ಅಮಾಯಕ’ ಎಂದು ಹೇಳಿಕೊಂಡಿದ್ದಾರೆ. ಆದರೆ ಪೊಲೀಸರು ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.










































