ಬೆಂಗಳೂರು, ಜೂ 26: ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣಕ್ಕೆರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಒತ್ತಾಯಪೂರ್ವಕವಾಗಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ, ಅವರು ಒಪ್ಪಿಗೆ ಸೂಚಿಸಿದ ಬಳಿಕವೇ ಜಮೀನು ಪಡೆದು ಟೌನ್ಶಿಪ್ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಟೌನ್ಶಿಪ್ ವಿಚಾರದಲ್ಲಿ ರೈತರ ಸಹಮತಿ ಪಡೆದುಕೊಂಡು ಮುಂದೆ ಸಾಗುತ್ತೇವೆಯೇ ಹೊರತು, ಅವರನ್ನು ಒಕ್ಕಲೆಬ್ಬಿಸಿ ಟೌನ್ಶಿಪ್ ಮಾಡುವುದಿಲ್ಲ. ಒಂದು ವೇಳೆ ರೈತರಿಗೆ ಕೊಡುವ ಪರಿಹಾರ ಸಾಕಾಗುತ್ತಿಲ್ಲ ಎಂದು ಅನಿಸಿದರೆ ಹೆಚ್ಚಿಸುವ ಸಾಧ್ಯತೆಯಿದೆ. ಒಟ್ಟಾರೆ ಯಾವುದೇ ಗೊಂದಲ ಇಲ್ಲದೆ ಟೌನ್ಶಿಪ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಎಐ ಹಬ್ಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಬಿಡದಿ ಪ್ರದೇಶದ ನೀರಿನ ಲಭ್ಯತೆಯನ್ನು ಮುಂದಿನ 40 ವರ್ಷಗಳ ದೃಷ್ಟಿಯಿಂದ ಸರ್ಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ಎಐ ಸೆಂಟರ್ ಮಾಡುವುದಕ್ಕೆ ಯಾವುದೆಲ್ಲ ಮಾನದಂಡಗಳಿವೆ ಎಂಬುದರ ಸ್ಪಷ್ಟ ಮಾಹಿತಿ ಯಾರಿಗೂ ಗೊತ್ತಿಲ್ಲ. ಈಗ ಅದನ್ನು ನಾವು ಬೇರೆ ಬೇರೆ ಕಡೆ ಪತ್ತೆ ಮಾಡುತ್ತಿದ್ದೇವೆ. ಇದು ಮಾಡುತ್ತಿರುವಂಥದ್ದಲ್ಲ. ಬೆಂಗಳೂರಿನ ಹಬ್ಗಾಗಿ ಮೇಲೆ ಸಂಚಾರದಟ್ಟಣೆ ಸೇರಿದಂತೆ ಅನೇಕ ಒತ್ತಡವಿದೆ. ನೈಸ್ ಪ್ರಾಜೆಕ್ಟ್ ಮಾಡಿದ ಸಂದರ್ಭದಲ್ಲಿ 7 ಟೌನ್ಶಿಪ್ ಮಾಡಬೇಕು ಎಂಬ ಪ್ರಸ್ತಾವನೆ ಬಂದಿತ್ತು. ಇದರ ಉದ್ದೇಶ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆ ಮಾಡಬೇಕು ಎನ್ನುವುದಾಗಿತ್ತು. ಪಕ್ಕದಲ್ಲಿರುವ ಕೋಲಾರ, ತುಮಕೂರು, ರಾಮನಗರ ಪಟ್ಟಣವನ್ನು ಅಭಿವೃದ್ಧಿ ಮಾಡಿದರೆ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆಯಾಗಲಿದೆ ಎನ್ನುವುದು ನಮ್ಮ ಉದ್ದೇಶ. ಈ ಕಾರಣಗಳಿಂದ ಬಿಡದಿ ಟೌನ್ಶಿಪ್ ಆದರೆ ಸ್ವಲ್ಪ ಸುಧಾರಿಸಬಹುದು ಎಂದು ಅವರು ವಿವರಿಸಿದರು.










































