ಚಿಕ್ಕಬಳ್ಳಾಪುರ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿನೀನು ಗೆದ್ದರೆ ನಾನು ನಿನ್ನ ಮನೆ ವಾಚ್ ಮ್ಯಾನ್ ಆಗುವೆ. ನಿನಗೆ ಸೆಲ್ಯುಟ್ ಹೊಡೆಯುವೆ. ನೀನು ಸೋತರೆ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ವಾಚ್ ಮ್ಯಾನ್ ಆಗುವೆಯಾ? ಗಂಡಸಾಗಿದ್ದರೆ ನನ್ನ ಈ ಸವಾಲು ಸ್ವೀಕರಿಸು’
– ಹೀಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ಗೆ ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ, ದೇವೇಗೌಡರು, ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ. ಕುಮಾರಸ್ವಾಮಿ ಅವರು ಪ್ರದೀಪ್ ಈಶ್ವರ್ ಬಗ್ಗೆ ಎಲ್ಲಿಯಾದರೂ ವೈಯಕ್ತಿಕವಾಗಿ ಟೀಕೆ ಮಾಡಿದ್ದರೆ ನಾನು ಪ್ರದೀಪ್ ಅವರ ಕ್ಷಮೆ ಕೋರುವೆ. ಎಚ್.ಡಿ.ಕುಮಾರಸ್ವಾಮಿ ಅವರು ಸುಮ್ಮನಿದ್ದರೂ ಅವರ ವಿರುದ್ಧ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ಪಕ್ಷ ಮತ್ತು ಆ ಪಕ್ಷದ ನಾಯಕರ ಬಗ್ಗೆ ಮಾತನಾಡಿದರೆ ನನ್ನ ಸಚಿವರನ್ನಾಗಿ ಮಾಡುವರು ಎಂದು ಪ್ರದೀಪ್ ಈಶ್ವರ್ ಭಾವಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸ್ಥಳೀಯ ಚುನಾವಣೆಗಳಲ್ಲಿಯೇ ಇವರಿಗೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆಲುವಿಗೆ ಜೆಡಿಎಸ್ ಕೊಡುಗೆಯೂ ಇದೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕರು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಆ ಪಕ್ಷದ ಮುಖಂಡರೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೊಡುಗೆ ಏನು ಎಂದು ಪ್ರಶ್ನಿಸಿದರು.ನಿನ್ನ ವಿರುದ್ಧ ಸ್ವ ಪಕ್ಷೀಯರೇ ಅಸಮಾಧಾನಗೊಂಡಿದ್ದಾರೆ. ನಿನ್ನ ಮುಖನೋಡಿ ಚಿಕ್ಕಬಳ್ಳಾಪುರ ಜನರು ಮತ ನೀಡಲಿಲ್ಲ. ಕಾಂಗ್ರೆಸ್ ಚಿಹ್ನೆಗೆ ಮತ ನೀಡಿದರು ಎಂದರು.










































