ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ(ಜಿಬಿಐಟಿ) ಯೋಜನೆ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದರು.
ಹೋರಾಟದ ವೇದಿಕೆಯಲ್ಲಿ ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ ಎಂಬ ನಾಮಫಲಕ ಅಂಟಿಸಿದ್ದ ಖಾಲಿ ಕುರ್ಚಿ ಪಕ್ಕ ಕುಮಾರಸ್ವಾಮಿ ಅವರು ಕುಳಿತರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ, ಮಾಜಿ ಶಾಸಕ ಎ. ಮಂಜುನಾಥ್ ಸೇರಿದಂತೆ ವಿವಿಧ ನಾಯಕರು ಜೊತೆಗಿದ್ದರು.ಮಾಜಿ ಶಾಸಕ ಎ. ಮಂಜುನಾಥ್ ಮಾತನಾಡಿ, ನಾವು 5,700 ಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ. ಅವುಗಳಿಗೆ ಉತ್ತರ ನೀಡಲಿ. ರೈತರ ತಲೆಗೆ ಹುಳ ಬಿಟ್ಟು ಜಮೀನು ಕೊಡುವಂತೆ ಮನವೊಲಿಸುತ್ತಿದ್ದಾರೆ. ಭೂ ಮಾಲೀಕರಿಗೆ ಪರಿಹಾರದ ಚೆಕ್ ಕೊಡಲು ಜಿಬಿಡಿಎ ಅಧ್ಯಕ್ಷರಿಗೆ ಯಾವ ಅಧಿಕಾರವಿದೆ. ಕುಮಾರಸ್ವಾಮಿ ಅವರನ್ನು ಪ್ರಶ್ನಿಸುವ ಅಧಿಕಾರ ಕಾಂಗ್ರೆಸ್ಗಿಲ್ಲ ಎಂದು ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ಗಿಡ ನೆಡುವ ಮುಖ್ಯಮಂತ್ರಿ ಬಿಡದಿ ಹೋಬಳಿಯಲ್ಲಿ ಲಕ್ಷಾಂತರ ಮರಗಿಡಗಳನ್ನು ನೆಲಸಮ ಮಾಡಿ ಟೌನ್ಶಿಪ್ ಮಾಡಲು ಮುಂದಾಗಿದ್ದಾರೆ. ನಮ್ಮ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರಿಂದ, ಇದೀಗ ರೈತರ ಹೆಸರಿನಲ್ಲಿ ಪರವಾಗಿ ಹೋರಾಟ ಶುರು ಮಾಡಿದ್ದಾರೆ. ಬೈರಮಂಗಲದಲ್ಲಿ ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆದರೂ ಇಡೀ ರಾಜ್ಯದ ಕಾರ್ಯಕರ್ತರು ರೊಚ್ಚಿಗೆದ್ದು ಇಲ್ಲಿಗೆ ಬರುತ್ತಾರೆ. ಆಗ ಏನೇ ನಡೆದರೂ ಸರ್ಕಾರವೇ ಹೊಣೆ ಎಂದರು.
ಮಹಿಳಾ ಹೋರಾಗಾರ್ತಿ ಜಯ ಮಾತನಾಡಿ, ರೈತರಿಗಾಗಿ ಮುಖ್ಯಮಂತ್ರಿ ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋದರೆ ಅವರ ಜೊತೆ ಸಾವಿರಾರು ರೈತರು ಸಹ ಜೈಲಿಗೆ ಬರುತ್ತೇವೆ. ಅನ್ನ ತಿನ್ನುವವರೆಲ್ಲರೂ ಅನ್ನದಾತರ ಬದುಕಿನ ಅಳಿವು- ಉಳಿವಿನ ಈ ಹೋರಾಟಕ್ಕೆ ಬೆಂಬಲ ನೀಡುತ್ತಾರೆ. ಇದು ರಾಜಕೀಯ ಮೀರಿದ ಹೋರಾಟವಿದು ಎಂದರು.











































