ಒಂದೇ ವಿಮಾನದಲ್ಲಿ ನಾಗ್ಪುರಕ್ಕೆ ಪ್ರಯಾಣಸಿದ ಫಡಣವೀಸ್, ಉದ್ಧವ್ ಠಾಕ್ರೆ

Picture of Savistara

Savistara

Bureau Report

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶುಕ್ರವಾರ ಮುಂಬೈನಿಂದ ನಾಗುರಕ್ಕೆ ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಾಗುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಇದ್ದರು.ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಪ್ರಸಾದ್ ಲಾಡ್, ‘ಉದ್ಧವ್ ಠಾಕ್ರೆ ಅವರು ಸಾಮಾನ್ಯ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ದೇವೇಂದ್ರ ಫಡಣವೀಸ್ ಅವರು ಮುಂಬೈ ಮತ್ತು ತಮ್ಮ ತವರೂರಾದ ನಾಗುರದ ನಡುವೆ ನಿಯಮಿತವಾಗಿ ಪ್ರಯಾಣಿಸುತ್ತಾರೆ. ಆದ್ದರಿಂದ ಅವರ ಪ್ರಯಾಣದಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ’ ಎಂದು ಹೇಳಿದ್ದಾರೆ.ಇಬ್ಬರು ನಾಯಕರ ನಡುವಿನ ಸಂವಹನದ ಕುರಿತು ಪ್ರತಿಕ್ರಿಯಿಸಿದ ಲಾಡ್, ‘ರಾಜಕೀಯ ವೈಷಮ್ಯ ಇದ್ದ ಮಾತ್ರಕ್ಕೆ ಶತ್ರುಗಳು ಆಗಿರಬೇಕೆಂದು ಇಲ್ಲ’ ಎಂದು ಹೇಳಿದ್ದಾರೆ.

‘ನಾವು ರಾಜಕೀಯ ವಿರೋಧಿಗಳಾಗಿದ್ದರೂ, ಶತ್ರುಗಳಲ್ಲ. ನಾವು ಸೌಹಾರ್ದಯುತ ಮಾತುಕತೆಗಳನ್ನು ನಡೆಸುತ್ತೇವೆ. ಬಿಜೆಪಿ ಮತ್ತು ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಡುವೆ ಸಂಬಂಧ ಹಳಸಿದ್ದರೂ, ಅವರು (ಉದ್ಧವ್) ತಮ್ಮ ಕುಟುಂಬದೊಂದಿಗೆ ನನ್ನ ಮಗಳ ಮದುವೆಗೆ ಬಂದಿದ್ದರು. ನಾವು ಒಬ್ಬರಿಗೊಬ್ಬರು ವೈರಿಗಳಲ್ಲ’ ಎಂದು ಹೇಳಿದ್ದಾರೆ.’ಪಕ್ಷದ ಗಡಿಗಳನ್ನು ಮೀರಿ ಸ್ನೇಹಪರ ಸಂಬಂಧವನ್ನು ಕಾಯ್ದುಕೊಳ್ಳುವಲ್ಲಿ ಫಡಣವೀಸ್ ಹೆಸರುವಾಸಿಯಾಗಿದ್ದಾರೆ’ ಎಂದು ಹೇಳಿದ ಲಾಡ್, ‘ಇಬ್ಬರು ನಾಯಕರು ಒಂದೇ ವಿಮಾನದಲ್ಲಿ ಪ್ರಯಾಣಿಸುವುದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಶಿವಸೇನಾ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ಮಾತನಾಡಿ, ಫಡಣವೀಸ್ ಮತ್ತು ಠಾಕ್ರೆ ಒಟ್ಟಿಗೆ ಪ್ರಯಾಣಿಸಿರುವುದರಲ್ಲಿ ಅಂತಹ ವಿಶೇಷವೇನೂ ಇಲ್ಲ’ ಎಂದು ಹೇಳಿದ್ದಾರೆ.“ಅಂತಹ ಭೇಟಿಯಲ್ಲಿ ನನಗೆ ಯಾವುದೇ ಮಹತ್ವ ಕಾಣಿಸುತ್ತಿಲ್ಲ. ಇದು ಕೇವಲ ಕಾಕತಾಳೀಯ. ಅದಕ್ಕಿಂತ ಹೆಚ್ಚೇನೂ ಅಲ್ಲ’ ಎಂದು ಅಂಧಾರೆ ಅಭಿಪ್ರಾಯಪಟ್ಟಿದ್ದಾರೆ.

[t4b-ticker]
error: Content is protected !!