ಪಂಜದ ಕಾಂಗ್ರೆಸ್ ಪಕ್ಷದಲ್ಲಿ ದಿಢೀರ್ ಭಾರಿ ರಾಜಕೀಯ ಬೆಳವಣಿಗೆಯೊಂದು ಸಂಭವಿಸಿದ್ದು, ಸ್ಥಳೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.
ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ಮುಜುಗರಕ್ಕೆ ಸಂಬಂಧಿಸಿದಂತೆ ದೇವಿ ಪ್ರಸಾದ್ ಕಾನತ್ತೂರು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ತೀವ್ರಗೊಂಡಿದೆ. ಮೂಲ ಕಾಂಗ್ರೆಸ್ನ ಹಿರಿಯ ಹಾಗೂ ನಿಷ್ಠಾವಂತ ನಾಯಕರಾದ ಪಂಜ ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಪುಂಡಿಮನೆ ಮತ್ತು ಅವರ ಬಳಗದವರು ಈ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಹಠಾತ್ ಬೆಳವಣಿಗೆಯಿಂದ ಪಂಜ ಪ್ರದೇಶದ ಕಾಂಗ್ರೆಸ್ ಪಕ್ಷದಲ್ಲಿ ಒಳಒಡಕು ಮೂಡಿದ್ದು, ಪ್ರಬಲ ನಾಯಕರ ನಡುವೆ ತೀವ್ರ ಮುಜುಗರದ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ತಮ್ಮ ಒತ್ತಾಯಕ್ಕೆ ಸ್ಪಂದಿಸಿ ದೇವಿಪ್ರಸಾದ್ ಕಾನತ್ತೂರು ರಾಜೀನಾಮೆ ನೀಡದಿದ್ದಲ್ಲಿ, ಸ್ವತಃ ದಿನೇಶ್ ಪುಂಡಿಮನೆ ಹಾಗೂ ಅವರ ಬೆಂಬಲಿಗರ ಬಳಗವೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಈಗಾಗಲೇ ರಾಜೀನಾಮೆ ಪ್ರಕ್ರಿಯೆಯಲ್ಲಿದ್ದಾರೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.
















































