ಇಸ್ಲಾಮಾಬಾದ್: ಅಗತ್ಯ ಬಿದ್ದರೆ ಮದರಸಾದ (Madrassa Students) ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತೇವೆ. ಅವರು ನಮ್ಮ ಎರಡನೇ ಹಂತದ ರಕ್ಷಣಾ ಪಡೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಹೇಳಿಕೆ ನೀಡಿದ್ದಾರೆ.ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪಾಕ್ ಸಚಿವ ಆಸಿಫ್, ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಎರಡನೇ ಹಂತದ ರಕ್ಷಣಾ ಪಡೆ ಎಂದು ತಿಳಿಸಿದ್ದಾರೆ.
ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ಹಂತದ ರಕ್ಷಣಾ ಸಿಬ್ಬಂದಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಿ ಓದುತ್ತಿರುವ ಯುವಕರನ್ನು ಸಮಯ ಬಂದಾಗ ಅಗತ್ಯವಿರುವಂತೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ. ನಾವು ಭಾರತದ ಡ್ರೋನ್ ದಾಳಿಯನ್ನು ತಡೆದಿಲ್ಲ. ನಮ್ಮ ಸ್ಥಳಗಳ ಬಗ್ಗೆ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿದೆವು. ನಿನ್ನೆ ಭಾರತವು ನಮ್ಮ ಸ್ಥಳಗಳನ್ನು ಪತ್ತೆಹಚ್ಚಲು ಡ್ರೋನ್ ದಾಳಿ ಮಾಡಿತು. ನಾನು ತಾಂತ್ರಿಕ ವಿಷಯಗಳನ್ನು ವಿವರಿಸಲು ಸಾಧ್ಯವಿಲ್ಲ ಎಂದು ಪಾಕ್ ರಕ್ಷಣಾ ಸಚಿವ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಹೇಳಿಕೆ ನೀಡಿದ್ದಾರೆ.
ಭಾರತವು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ, ಮೇ 8 ರಂದು ಜಮ್ಮು ಮತ್ತು ಕಾಶ್ಮೀರ, ಗಡಿ ರಾಜ್ಯಗಳ ಹಲವಾರು ಭಾಗಗಳಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಜಮ್ಮು ವಾಯುನೆಲೆ, ಸೇನಾ ನೆಲೆ, ಜಮ್ಮು ವಿಶ್ವವಿದ್ಯಾಲಯ ಮತ್ತು ಇತರ ನಿರ್ಣಾಯಕ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ಈ ದಾಳಿ ನಡೆಸಿತು. ಆದರೆ, ಪಾಕ್ನ ಎಲ್ಲಾ ದಾಳಿಗಳನ್ನು ಭಾರತ ವಿಫಲಗೊಳಿಸಿದೆ.













































