ದೇಶಾದ್ಯಂತ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಸಂಭ್ರಮ ಮನೆಮಾಡಿದ್ದು, ಈ ಹಿನ್ನೆಲೇ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಸತತ 13ನೇ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿ, ದೇಶವನ್ನುದ್ದೇಶಿಸಿ ಮಾತನಾಡಿದರು.
ಸ್ವದೇಶಿ ತೋಪುಗಳ ಗೌರವ ವಂದನೆ
ಪ್ರಧಾನಿ ಮೋದಿ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, ಸ್ವದೇಶಿ ನಿರ್ಮಿತ 105 ಎಂಎಂ ಲೈಟ್ ಫೀಲ್ಡ್ ಗನ್ಗಳಿಂದ 21 ಕುಲಾವಾರು ತೋಪುಗಳ ಗೌರವ ವಂದನೆ ಸಲ್ಲಿಸಲಾಯಿತು. ಈ ವಿಶೇಷ ಗೌರವ ವಂದನೆಯನ್ನು 1721 ಫೀಲ್ಡ್ ಬ್ಯಾಟರಿಯ ಸೈನಿಕರು ನಿರ್ವಹಿಸಿದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾತ್ಮಾಗಾಂಧಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಕ್ರಾಂತಿಕಾರಿಗಳು ಮತ್ತು ಹೋರಾಟಗಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. “ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ನಮಗೆ ಸದಾ ಪ್ರೇರಣೆ” ಎಂದು ಅವರು ಸ್ಮರಿಸಿದರು.
‘ಪ್ರತಿಯೊಬ್ಬರ ಮನದಲ್ಲೂ ತಿರಂಗಾ’
ದೇಶಾದ್ಯಂತ ಹರಡಿರುವ ದೇಶಭಕ್ತಿಯ ಸಂಭ್ರಮವನ್ನು ಕೊಂಡಾಡಿದ ಪ್ರಧಾನಿ, “ಇಂದು ಪ್ರತಿಯೊಬ್ಬ ಭಾರತೀಯನ ಹೃದಯವೂ ವಂದೇ ಮಾತರಂ ಧ್ವನಿಗೆ ಮಿಡಿಯುತ್ತಿದೆ. ಇಂದು ದೇಶದ ಪ್ರತಿಯೊಂದು ಮನೆಯೂ ತಿರಂಗಾ ಆಗಿದೆ, ಪ್ರತಿಯೊಬ್ಬರ ಮನವೂ ತಿರಂಗಾ ಆಗಿದೆ” ಎಂದು ಹೆಮ್ಮೆಯಿಂದ ಹೇಳಿದರು.
ವಿಕಸಿತ ಭಾರತದ ಸಂಕಲ್ಪ
ಪ್ರಧಾನಿ ಅವರು ತಮ್ಮ ಭಾಷಣದಲ್ಲಿ “ವಿಕಸಿತ ಭಾರತ” ನಿರ್ಮಾಣದ ದೊಡ್ಡ ಕನಸನ್ನು ದೇಶದ ಜನರ ಮುಂದೆ ಇಟ್ಟರು. 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೇಶದ ಯುವಶಕ್ತಿ, ಮಹಿಳೆಯರು ಹಾಗೂ ನಾಗರಿಕರು ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಸರ್ಕಾರದ ಆದ್ಯತೆಗಳು ಮತ್ತು ದೇಶದ ಸರ್ವತೋಮುಖ ಪ್ರಗತಿಯ ದೃಢ ಸಂಕಲ್ಪವನ್ನು ಸಾರುವ ಮೂಲಕ ಕೆಂಪುಕೋಟೆಯ ಈ ಸಮಾರಂಭವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.










































