ಪಹಲ್ಗಾಮ್ ಉಗ್ರದಾಳಿ ಮತ್ತು ಅದಕ್ಕೆ ಉತ್ತರವಾಗಿ ಭಾರತದ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿರುವ ಸಂಘರ್ಷದ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದ ಜಾಗತಿಕ ನಾಯಕರಿಗೆ ಭಾರತ ಖಡಕ್ ಸಂದೇಶ ರವಾನಿಸಿದೆ..
ನವದೆಹಲಿ: ಭಾರತದ ಏಕತೆ-ಸೌಹಾರ್ಧತೆ ಮತ್ತು ಆಂತರಿಕ ರಕ್ಷಣೆಯ ವಿಚಾರಕ್ಕೆ ಬಂದರೆ ಪರಮಾಪ್ತ ರಾಷ್ಟ್ರವಾದರೂ ಮಾತು ಕೇಳಲ್ಲ ಎಂಬ ಖಡಕ್ ಸಂದೇಶವನ್ನು ಇದೀಗ ಭಾರತ G7 ನಾಯಕರಿಗೆ ರವಾನಿಸಿದೆ.ಹೌದು.. ಪಹಲ್ಗಾಮ್ ಉಗ್ರದಾಳಿ ಮತ್ತು ಅದಕ್ಕೆ ಉತ್ತರವಾಗಿ ಭಾರತದ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿರುವ ಸಂಘರ್ಷದ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದ ಜಾಗತಿಕ ನಾಯಕರಿಗೆ ಭಾರತ ಖಡಕ್ ಸಂದೇಶ ರವಾನಿಸಿದ್ದು, ಭಾರತದ ಏಕತೆ-ಸೌಹಾರ್ಧತೆ ಮತ್ತು ಆಂತರಿಕ ರಕ್ಷಣೆಯ ವಿಚಾರಕ್ಕೆ ಬಂದರೆ ಯಾರ ಮಾತೂ ಕೇಳುವುದಿಲ್ಲ ಎಂದು ದಿಟ್ಟ ಉತ್ತರ ನೀಡಿದೆ.
ಜೈಶಂಕರ್ ಖಡಕ್ ತಿರುಗೇಟು
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್.. ‘ಭಾರತೀಯ ನಾಗರಿಕರು ದಾಳಿಗೆ ಒಳಗಾಗುತ್ತಿರುವ ಸಮಯದಲ್ಲಿ, ದಾಳಿಯ ರೂವಾರಿ ಪಾಕಿಸ್ತಾನಕ್ಕೆ ಐಎಂಎಫ್ ಆರ್ಥಿಕ ನೆರವು ನೀಡಿದ್ದು, ಈ ಮೂಲಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ. ಇದೀಗ ತನ್ನ ರಕ್ಷಣೆಗೆ ಮುಂದಾಗಿರುವ ಭಾರತವನ್ನು ಸುಮ್ಮನಿರಲು ಆದೇಶಿಸುತ್ತಿದೆ.ನೀವು ಎಲ್ಲೋ ಕುಳಿತು ಭಾರತವನ್ನು ಸುಮ್ಮನಿರುವುಂತೆ ಆದೇಶಿಸಿದರೆ ನಾವು ಸುಮ್ಮನಿರುತ್ತೇವೆ ಎಂದು ವಿದೇಶಗಳು ಭಾವಿಸುತ್ತಿವೆ. ಆದರೆ ಇದು ಹೊಸ ಭಾರತ… ಭಾರತದ ಮೇಲಿನ ಅವರ ನಿಯಂತ್ರಣದ ಸಮಯ ಮುಗಿದಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇದು ನವ ಭಾರತ. ನಾವು ನಮ್ಮ ಜನರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಬೇರೆ ಯಾವುದಕ್ಕಿಂತ ಹೆಚ್ಚಾಗಿ ಕಾಳಜಿ ವಹಿಸುತ್ತೇವೆ ಎಂದು ಹೇಳಿದ್ದಾರೆ.
G7 ದೇಶಗಳ ವಿದೇಶಾಂಗ ಮಂತ್ರಿಗಳ ಸಭೆ, ಭಾರತ-ಪಾಕ್ ಸಂಘರ್ಷ ಕುರಿತು ಆತಂಕ
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿರುವ ಸೇನಾ ಸಂಘರ್ಷ ವಿಚಾರವಾಗಿ ಇತ್ತೀಚೆಗೆ G7 ದೇಶಗಳ ವಿದೇಶಾಂಗ ಮಂತ್ರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ G7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಈ ನಾಯಕರು, ‘ನಾವು G7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿ, ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ಗರಿಷ್ಠ ಸಂಯಮವನ್ನು ಕೋರುತ್ತೇವೆ.
ಮತ್ತಷ್ಟು ಮಿಲಿಟರಿ ಉಲ್ಬಣವು ಪ್ರಾದೇಶಿಕ ಸ್ಥಿರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಎರಡೂ ಕಡೆಯ ನಾಗರಿಕರ ಸುರಕ್ಷತೆಯ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಾವು ಕರೆ ನೀಡುತ್ತೇವೆ ಎಂದಿದ್ದರು.
ಅಲ್ಲದೆ ಶಾಂತಿಯುತ ಫಲಿತಾಂಶಕ್ಕಾಗಿ ಎರಡೂ ದೇಶಗಳು ನೇರ ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇವೆ. ನಾವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ ಮತ್ತು ತ್ವರಿತ ಮತ್ತು ಶಾಶ್ವತ ರಾಜತಾಂತ್ರಿಕ ನಿರ್ಣಯಕ್ಕಾಗಿ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಜಂಟಿ ಹೇಳಿಕೆ ನೀಡಿತ್ತು.ಇದೀಗ ಇದೇ ಬೆಳವಣಿಗೆ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕಿಡಿಕಾರಿದ್ದು, ಉಭಯ ದೇಶಗಳ ನಡುವೆ ಸಂಯಮ ಕೋರುವ ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನಕ್ಕೆ ಐಎಂಎಫ್ ಆರ್ಥಿಕ ನೆರವು ನೀಡದಂತೆ ಏಕೆ ತಡೆಯಲಿಲ್ಲ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣವನ್ನು ಪಾಕಿಸ್ತಾನ ಖಂಡಿತಾ ಭಾರತದ ವಿರುದ್ಧವೇ ಬಳಸುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.













































