ಸದಾಶಿವನಗರದಲ್ಲಿನ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ದಿಢೀರ್ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಸಂಪುಟ ಪುನಾರಚನೆ ಕೂಗಿನ ಮಧ್ಯೆ ಬಿ.ಕೆ. ಹರಿಪ್ರಸಾದ್ ಮನೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್ ಖಾನ್ ಜೊತೆಗೂಡಿ ಇಂದು ಬೆಳಗ್ಗೆ ಸದಾಶಿವನಗರದಲ್ಲಿನ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದರು. ನಿನ್ನೆಯಷ್ಟೇ ರಾಜ್ಯಕ್ಕೆ ಕೆ.ಸಿ. ವೇಣುಗೋಪಾಲ್, ಸುರ್ಜೆವಾಲ ಆಗಮಿಸಿ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಿ.ಕೆ. ಹರಿಪ್ರಸಾದ್ ಭೇಟಿ ಮಹತ್ವ ಪಡೆದುಕೊಂಡಿದೆ.
ಭೇಟಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಹರಿಪ್ರಸಾದ್ ಬ್ರೇಕ್ ಫಾಸ್ಟ್ಗೆ ಕರೆದಿದ್ದರು. ಬರುತ್ತೇನೆ ಎಂದಿದ್ದೆ, ಅದಕ್ಕೆ ಬಂದಿದ್ದೇನೆ. ರಾಜಕೀಯ, ಮಂಗಳೂರಿನ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜಕೀಯ ಚರ್ಚೆ ಅಂತಲ್ಲ. ಜನರಲ್ ಆಗಿ ಚರ್ಚೆ ಮಾಡಿದ್ದೇವೆ. ಮಂಗಳೂರು ವಿಚಾರ ಚರ್ಚೆ ಯಾಗಿದೆ. ಅಲ್ಲಿಗೆ ಸೌಹಾರ್ದತೆ ಬರಬೇಕು. ಹಿಂದೂ, ಮುಸ್ಲಿಂ ನಡುವೆ ಯಾವುದೇ ದ್ವೇಷ ಇರಬಾರದು. ಸೌಹಾರ್ದತೆ ಬರಬೇಕು ಅಂತ ಚರ್ಚಿಸಿದ್ದೇವೆ. ಹರಿಪ್ರಸಾದ್ ಗೆ ಮಂಗಳೂರಿಗೆ ಹೋಗಿ ಬನ್ನಿ ಎಂದಿದ್ದೇನೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬನ್ನಿ ಎಂದಿದ್ದೇನೆ” ಎಂದು ಉತ್ತರಿಸಿದರು.
ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, “ರಾಜಕೀಯದ ಬಗ್ಗೆ ಯಾವುದೂ ಚರ್ಚೆಯಿಲ್ಲ. ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಸಚಿವ ಸ್ಥಾನ, ಸಭಾಪತಿ ಸ್ಥಾನದ ಬಗ್ಗೆ ಏನೂ ಚರ್ಚೆ ಆಗಿಲ್ಲ. ನೀವು ತಿಳಿದಂತೆ ಏನು ಮಾತನಾಡಿಲ್ಲ. ಬರೀ ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ” ಎಂದರು.
ದಿಢೀರ್ ಭೇಟಿ ಸುತ್ತ ಹಲವು ಅನುಮಾನ:
ಸಿಎಂ ಏಕಾಏಕಿ ಭೇಟಿಯ ಹಿಂದಿರುವ ಉದ್ದೇಶವೇನು ಎಂಬುದು ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಹರಿಪ್ರಸಾದ್, ಪದೇ ಪದೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದರು. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಿ.ಕೆ.ಹರಿಪ್ರಾಸದ್ ಭೇಟಿ ಕುತೂಹಲ ಮೂಡಿಸಿದೆ.
ಈಗಾಗಲೇ ಸಂಪುಟ ಪುನರಚನೆ ಕೂಗು ಕೇಳಿಬರುತ್ತಿದೆ. ಬಿ.ಕೆ. ಹರಿಪ್ರಸಾದ್ ಸಚಿವ ಸ್ಥಾನದ ಬಲವಾದ ಆಕಾಂಕ್ಷಿಯಾಗಿದ್ದಾರೆ. ಇದೀಗ ಬಿ.ಕೆ. ಹರಿಪ್ರಸಾದ್ ಭೇಟಿ ಮಹತ್ವ ಪಡೆದುಕೊಂಡಿದೆ. ಇದರ ಜೊತೆಗೆ ಸಭಾಪತಿ ಮಾಡುವ ಬಗ್ಗೆನೂ ಸುದ್ದಿ ಹರಿದಾಡುತ್ತಿದ್ದು, ಸಿಎಂ-ಬಿ.ಕೆ.ಹರಿಪ್ರಸಾದ್ ಭೇಟಿ ಹಲವು ಮಹತ್ವಗಳನ್ನು ಪಡೆದುಕೊಂಡಿದೆ.












































