ಬಿಹಾರ ಎನ್‌ಡಿಎ ಸೀಟು ಹಂಚಿಕೆ ಫೈನಲ್‌ : ನಿತೀಶ್‌ ಕುಮಾರ್ ಷರತ್ತಿಗೆ‌ ಮೋದಿ ಒಪ್ಪಿಗೆ! ಜೆಡಿಯುಗೆ ಹೆಚ್ಚಿನ ಸ್ಥಾನ, ಬಿಜೆಪಿ ‘ಮಹಾ’ತ್ಯಾಗ!

Picture of Savistara

Savistara

Bureau Report

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಗ್ಗಂಟಾಗಿದ್ದ ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಜೆಡಿಯು 102 ಮತ್ತು ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ನಿತೀಶ್ ಕುಮಾರ್ ನಾಯಕತ್ವಕ್ಕೆ ಬಿಜೆಪಿ ಮನ್ನಣೆ ನೀಡಿದ್ದು, ಜೆಡಿಯುಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಮೂಲಕ ಮೈತ್ರಿಕೂಟದಲ್ಲಿ ದೊಡ್ಡಣ್ಣನ ಸ್ಥಾನ ನೀಡಲಾಗಿದೆ. ಕೇಂದ್ರದಲ್ಲಿ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಕೂಡ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ನಿತೀಶ್‌ ಕುಮಾರ್‌ ಅವರ ಹಲವು ಷರತ್ತುಗಳಿಗೆ ಮೋದಿ ಒಪ್ಪಿದ್ದಾರೆ ಎನ್ನಲಾಗಿದೆ.

ಹೊಸದಿಲ್ಲಿ : ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಬಿಹಾರದ ಗದ್ದುಗೆ ಏರಲು ಎನ್‌ಡಿಎ ಹಾಗೂ ಇಂಡಿ ಒಕ್ಕೂಟ ಪೈಪೋಟಿಗೆ ಬಿದ್ದಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತದಾರ ಅಧಿಕಾರ ಯಾತ್ರೆಯ ಮೂಲಕ ಚುನಾವಣೆ ಕಣಕ್ಕೆ ಕಿಚ್ಚು ಹೊತ್ತಿಸಿದ್ದಾರೆ. ಇತ್ತ ಆಡಳಿತಾರೂಢ ಎನ್‌ಡಿಎ ಕೂಡ ಹಲವು ಘೋಷಣೆಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಇದರ ನಡುವೆ ಕಗ್ಗಂಟಾಗಿದ್ದ ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಫೈನಲ್‌ ಆಗಿದ್ದು, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ದಿಲ್ಲಿ ಭೇಟಿ ಬಳಿಕ ಎನ್‌ಡಿಎ ತನ್ನ ಚಟುವಟಿಕೆಗಳಿಗೆ ವೇಗ ನೀಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು ಕೂಡ, ಕಳೆದ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರು ಕೂಡ ಜೆಡಿಯುಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಿಗೆ ಕಡಿಮೆ ಸ್ಥಾನಗಳನ್ನು ನೀಡಿದ್ದ ಬಿಜೆಪಿ, ಬಿಹಾರದಲ್ಲಿ ಆ ಸಾಹಸಕ್ಕೆ ಯಾಕೆ ಕೈ ಹಾಕಿಲ್ಲ? ಲೋಕಸಭೆಯಲ್ಲಿ ಒಂದು ಸ್ಥಾನ ಹೆಚ್ಚು ಪಡೆದಿದ್ದ ಬಿಜೆಪಿ ಈಗ ಕಡಿಮೆ ಸೀಟುಗಳಿಗೆ ಒಪ್ಪಿದ್ದೇಕೆ? ಮೋದಿ ಮುಂದೆ ನಿತೀಶ್‌ ಕುಮಾರ್‌ ಇಟ್ಟ ಬೇಡಿಕೆಗಳೇನು, ಎಂಬುದನ್ನು ಇಲ್ಲಿ ನೋಡೊಣ ಬನ್ನಿ

ಹೌದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದಿಲ್ಲಿಗೆ ಭೇಟಿ ನೀಡಿದ ಬಳಿಕ ಎನ್‌ಡಿಎ ಸೀಟು ಹಂಚಿಕೆ ಕಗ್ಗಂಟು ಬಹುತೇಕ ಬಗೆಹರಿದಿದೆ. ಮೂಲಗಳ ಪ್ರಕಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 102 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದರೆ, ಬಿಜೆಪಿ 101 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಈ ಸೂತ್ರದ ಅಡಿಯಲ್ಲಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ 20 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನುಳಿದಂತೆ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಮಿ ಮೋರ್ಚಾ ಮತ್ತು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಗಳಿಗೆ ತಲಾ 10 ಸ್ಥಾನಗಳು ಲಭಿಸಲಿವೆ ಎಂದು ತಿಳಿದುಬಂದಿದ್ದು, ಶೀಘ್ರದಲ್ಲೇ ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ. ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಗೆಲ್ಲದ ಚಿರಾಗ್‌ ಪಾಸ್ವಾನ್‌ ಅವರಿಗೆ 20 ಸೀಟನ್ನು ನೀಡಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಮೋದಿಯ ಹನುಮಂತನಿಗೂ ಎನ್‌ಡಿಎ ಸಿಹಿಸುದ್ದಿಯನ್ನು ನೀಡಿದೆ.

2020ಕ್ಕೆ ಹೋಲಿಸಿದರೆ BJP-JDUಗೆ ಸ್ಥಾನ ಕಡಿತ!

ಈ ಬಾರಿಯ ಸೀಟು ಹಂಚಿಕೆ ಕಳೆದ ಚುನಾವಣೆಗೆ ಹೋಲಿಸಿದರೆ ಮಹತ್ವದ ಬದಲಾವಣೆ ಕಂಡಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿ 74 ಸ್ಥಾನಗಳನ್ನು ಗೆದ್ದು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ, ಗೆದ್ದಿದ್ದು ಕೇವಲ 43 ಸ್ಥಾನಗಳನ್ನು ಮಾತ್ರ. ಆದರೆ ಈ ಬಾರಿ, ಎರಡೂ ಪ್ರಮುಖ ಪಕ್ಷಗಳು ತಮ್ಮ ಸ್ಥಾನಗಳನ್ನು ಕಡಿಮೆ ಮಾಡಿಕೊಂಡಿವೆ. ಜೆಡಿಯು 13 ಸ್ಥಾನಗಳನ್ನು ಮತ್ತು ಬಿಜೆಪಿ 9 ಸ್ಥಾನಗಳನ್ನು ಕಳೆದುಕೊಂಡು, ಸಣ್ಣ ಮಿತ್ರಪಕ್ಷಗಳಿಗೆ ದಾರಿ ಮಾಡಿಕೊಟ್ಟಿವೆ. ಕಳೆ ಬಾರಿ ಬಿಜೆಪಿ, ಜೆಡಿಯು, ಎಚ್‌ಎಎಂ ಹಾಗೂ ವಿಐಪಿ ಪಕ್ಷಗಳು ಮೈತ್ರಿಕೂಟದಲ್ಲಿದ್ದವು. ಈ ಬಾರಿ ವಿಐಪಿ ಮಹಾಘಟಬಂಧನ್‌ಗೆ ಹೋಗಿದ್ದು, ಎಲ್‌ಜೆಪಿ ಹಾಗೂ ಆರ್‌ಎಲ್‌ಎಂಪಿಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿವೆ. ಈ ಹಿನ್ನೆಲೆ ಅವುಗಳಿಗೆ ಪ್ರಾತಿನಿಧ್ಯ ನೀಡಲು ಬಿಜೆಪಿ ಹಾಗೂ ಜೆಡಿಯು ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸುತ್ತಿವೆ.

ನಿತೀಶ್ ನಾಯಕತ್ವಕ್ಕೆ ಮನ್ನಣೆ, JDUಗೆ ದೊಡ್ಡಣ್ಣನ ಪಾತ್ರ!

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಮತ್ತು ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಅಲ್ಲಿ ಬಿಜೆಪಿ ಒಂದು ಸ್ಥಾನ ಹೆಚ್ಚು ಪಡೆದು ದೊಡ್ಡ ಪಕ್ಷವಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಈ ಚಿತ್ರಣವನ್ನು ಬದಲಿಸಲಾಗಿದೆ. ಜೆಡಿಯು, ಬಿಜೆಪಿಗೆ ಹೋಲಿಸಿದರೆ ಒಂದು ಸ್ಥಾನ ಹೆಚ್ಚು ಪಡೆಯುವ ಮೂಲಕ ಮೈತ್ರಿಕೂಟದಲ್ಲಿ ತಾನೇ ದೊಡ್ಡಣ್ಣ ಎಂಬುದನ್ನು ಸಾಬೀತುಪಡಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ಮೈತ್ರಿಕೂಟದ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ, ಅವರ ಪಕ್ಷಕ್ಕೆ ಹಿರಿಯಣ್ಣನ ಸ್ಥಾನಮಾನ ನೀಡುವುದು ಅನಿವಾರ್ಯವಾಗಿತ್ತು. ಕಳೆದ ಬಾರಿ ಕಡಿಮೆ ಸ್ಥಾನ ಗೆದ್ದಿದ್ದರು ಕೂಡ ಬಿಜೆಪಿ ಜೆಡಿಯುಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿಗಳಿಗೆ ಕಡಿಮೆ ಸ್ಥಾನ ನೀಡಿ ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ಪಡೆದಿತ್ತು. ಆದರೆ, ಮಹಾರಾಷ್ಟ್ರದ ತಂತ್ರವನ್ನು ಬಿಹಾರದಲ್ಲಿ ಬಿಜೆಪಿ ಅನುಸರಿಸುತ್ತಿಲ್ಲ ಎಂಬುದು ಕುತೂಹಲ ಸೃಷ್ಟಿಸಿದೆ.

ಮೋದಿ ಮುಂದೆ ಜೆಡಿಯು ಇಟ್ಟ ಷರತ್ತು ಏನು?

ಕಳೆದ ಬಾರಿ ಗೆಲುವಿನ ಪ್ರಮಾಣದಲ್ಲಿ ಬಿಜೆಪಿಯೇ ಬಲಿಷ್ಠವಾಗಿದ್ದರೂ, ಕಡಿಮೆ ಸ್ಥಾನಗಳಿಗೆ ಒಪ್ಪಿಕೊಳ್ಳಲು ಪ್ರಬಲ ಕಾರಣಗಳಿವೆ. ಜೆಡಿಯು ಪಕ್ಷವು ಸೀಟು ಹಂಚಿಕೆ ವಿಚಾರದಲ್ಲಿ ಪ್ರಮುಖ ವಾದಗಳನ್ನು ಮುಂದಿಟ್ಟಿತ್ತು. ಅದರಲ್ಲಿ ಪ್ರಮುಖವಾಗಿ 2020ರ ಚುನಾವಣೆಯಲ್ಲಿ ಜೆಡಿಯು ಕಳಪೆ ಪ್ರದರ್ಶನ ನೀಡಲು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಪಕ್ಷವೇ ನೇರ ಕಾರಣ ಎಂದು ಜೆಡಿಯು ಬಲವಾಗಿ ವಾದಿಸಿತು. ಆಗ ಎಲ್‌ಜೆಪಿ, ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದು ಎನ್‌ಡಿಎ ಮತಗಳ ವಿಭಜನೆಗೆ ಕಾರಣವಾಗಿ, ಜೆಡಿಯು ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಬಾರಿ ಅಂತಹ ತಪ್ಪು ಮರುಕಳಿಸಬಾರದು ಮತ್ತು ತಮ್ಮ ಪಕ್ಷದ ಬಲವನ್ನು ಕಡಿಮೆ ಅಂದಾಜು ಮಾಡಬಾರದು ಎಂಬುದು ಜೆಡಿಯು ನಿಲುವಾಗಿತ್ತು. ಅದು ಸಕ್ಸಸ್‌ ಆಗಿದೆ. ಅದಲ್ಲದೇ ಈ ಬಾರಿಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೆಡಿಯು ಹಾಗೂ ಟಿಡಿಪಿ ಮೇಲೆ ಅವಲಂಭಿತವಾಗಿದ್ದು, ಜೆಡಿಯು ಷರತ್ತುಗಳಿಗೆ ಒಪ್ಪಲೇಬೇಕಾದ ಅನಿವಾರ್ಯತೆ ಇದೆ.

ಇನ್ನೂ ಚುನಾವಣಾ ಪ್ರಚಾರವು ಸಂಪೂರ್ಣವಾಗಿ ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಉಳಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ. ಹೀಗಿರುವಾಗ, ಅವರ ಪಕ್ಷವು ಬಿಜೆಪಿಗಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅದು ತಪ್ಪು ಸಂದೇಶ ರವಾನಿಸುತ್ತದೆ. ಹೀಗಾಗಿ, ಹಿರಿಯಣ್ಣನ ಸ್ಥಾನಕ್ಕಾಗಿ ಜೆಡಿಯು ಪಟ್ಟು ಹಿಡಿದಿತ್ತು. ಇದರ ಜೊತೆ ಜೆಡಿಯು ಬಿಹಾರದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಸುಮಾರು ಶೇ.10ರಷ್ಟಿರುವ ಈ ಮತಬ್ಯಾಂಕ್, ಯಾವುದೇ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆ ನಮಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಜೆಡಿಯು ಹೇಳಿತ್ತು. ಅದಲ್ಲದೇ ಯಾವುದೇ ಕಾರಣಕ್ಕೂ 100ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಯು ಸಿದ್ಧವಿರಲಿಲ್ಲ. ಬಿಜೆಪಿ-ಜೆಡಿಯು ನಡುವೆ 50:50 ಅನುಪಾತದಲ್ಲಿಯೇ ಸೀಟು ಹಂಚಿಕೆಯಾಗಬೇಕು ಎಂದು ಜೆಡಿಯು ಡಿಮ್ಯಾಂಡ್‌ ಇಟ್ಟಿತ್ತು. ಈ ಎಲ್ಲ ಕಾರಣಗಳಿಂದ ಬಿಜೆಪಿ ಜೆಡಿಯು ಸೂತ್ರಕ್ಕೆ ಅನಿವಾರ್ಯವಾಗಿ ಜೈ ಎನ್ನಲೇಬೇಕಿದೆ.

20 ಸೀಟಿಗೆ ಒಪ್ತಾರಾ ಚಿರಾಗ್‌ ಪಾಸ್ವಾನ್‌?

ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಬಹುತೇಕ ಫೈನಲ್‌ ಆಗಿದೆ. ಆದರೆ, ಕ್ಷೇತ್ರಗಳ ಹಂಚಿಕೆ ಕಗ್ಗಂಟಾಗುವ ಸಾಧ್ಯತೆ ಇದೆ. ಜೆಡಿಯು ವಿರುದ್ಧ ಸದಾ ಉರಿದುಬೀಳುವ ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಅವರ ಮೇಲೆ ಎನ್‌ಡಿಎ ಮೈತ್ರಿಕೂಟದ ಮುಂದಿನ ಭವಿಷ್ಯ ನಿಂತಿದೆ. ಈ ಹಿಂದೆಯೇ ಹೆಚ್ಚಿನ ಕ್ಷೇತ್ರಗಳಿಗೆ ಚಿರಾಗ್‌ ಪಾಸ್ವಾನ್‌ ಪಟ್ಟು ಹಿಡಿದಿದ್ದರು. ಆದರೆ, 20 ಕ್ಷೇತ್ರಗಳಿಗೆ ಚಿರಾಗ್‌ ಪಾಸ್ವಾನ್‌ ಒಪ್ಪಿಕೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಕೆಲ ದಿನಗಳ ಹಿಂದಷ್ಟೇ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಚಿರಾಗ್‌ ಪಾಸ್ವಾನ್‌ ಕಳೆದ ಬಾರಿಯಂತೆ ಜೆಡಿಯು ವಿರುದ್ಧ ಸ್ಪರ್ಧಿಸಿ ಮತ ವಿಭಜನೆಗೆ ಕಾರಣವಾಗ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಅಭ್ಯರ್ಥಿಯ ಗೆಲ್ಲುವ ಸಾಮರ್ಥ್ಯ, ಸ್ಥಳೀಯ ಜಾತಿ ಸಮೀಕರಣಗಳು ಮತ್ತು ಕಾರ್ಯಕರ್ತರ ಬಲವನ್ನು ಆಧರಿಸಿ ಫೈನಲ್‌ ಡಿಸೀಷನ್‌ ತೆಗೆದುಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಶೇ.5ರಷ್ಟು ಹೊಂದಾಣಿಕೆಗೆ ಅವಕಾವನ್ನು ಮುಕ್ತವಾಗಿ ಇರಿಸಿಕೊಳ್ಳಲಾಗಿದೆ.

ಒಟ್ಟಿನಲ್ಲಿ, ಬಿಹಾರ ಎನ್‌ಡಿಎ ಮೈತ್ರಿಕೂಟವು ಸೀಟು ಹಂಚಿಕೆ ಎಂಬ ಮೊದಲ ಅಗ್ನಿಪರೀಕ್ಷೆಯಲ್ಲಿ ಪಾಸಾಗಿದೆ. ನಿತೀಶ್ ಕುಮಾರ್ ಅವರ ನಾಯಕತ್ವಕ್ಕೆ ಎನ್‌ಡಿಎ ಹಾಗೂ ಮೋದಿ ಮಣೆ ಹಾಕಿದ್ದು, ವಿಪಕ್ಷಗಳಿಗೆ ನಾವು ರೆಡಿ ಎಂಬ ಸಂದೇಶವನ್ನು ಎನ್‌ಡಿಎ ನೀಡಿದೆ. ಈ ಸೀಟು ಹಂಚಿಕೆ ಫೈನಲ್‌ ಆಗುತ್ತಾ? ಅಥವಾ ಚಿರಾಗ್‌ ಪಾಸ್ವಾನ್‌ ರೆಬೆಲ್‌ ಆಗ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಈ ಸೀಟು ಹಂಚಿಕೆಗೆ ಮಹಾಘಟಬಂಧನ್‌ ಅಥವಾ ಇಂಡಿ ಒಕ್ಕೂಟ ಯಾವ ರೀತಿ ಪ್ಲಾನ್‌ ಮಾಡುತ್ತೆ ಎಂಬುದನ್ನು ನೋಡಬೇಕಿದೆ.

[t4b-ticker]
error: Content is protected !!