Mohan Bhagwat: ಬಿಜೆಪಿಯ ಮಾತೃ ಸಂಸ್ಥೆ ಎಂದು ಕರೆಸಿಕೊಳ್ಳುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಹೊರಾಟ ನಡೆಯಬಹುದು ಆದರೆ ಯಾವುದೇ ರೀತಿಯ ಜಗಳ ಇಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಆರ್ಎಸ್ಎಸ್ ಮತ್ತು ಬಿಜೆಪಿ ಒಬ್ಬರನ್ನೊಬ್ಬರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆಯೇ ಹೊರತು, ಬಿಜೆಪಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಶುದ್ಧ ಸುಳ್ಳು, ಇದೆಲ್ಲಾ ವಿರೋಧ ಪಕ್ಷಗಳು ತಪ್ಪು ಕಲ್ಪನೆ ಎಂದರು. ಆರ್ ಎಸ್ಎಸ್, ಪ್ರಸ್ತುತ ಬಿಜೆಪಿ ಸರ್ಕಾರ ಅಷ್ಟೆ ಅಲ್ಲದೇ ಬೇರೆ ಸರ್ಕಾರಗಳೊಂದಿಗೂ ಉತ್ತಮ ಸಮನ್ವಯತೆ ಸಾಧಿಸಿದ್ದು, ಪರಸ್ಪರ ವ್ಯತ್ಸಾಸಗಳಿರಬಹುದು ಅಷ್ಟೆ ಎಂದರು.
ಜನಸಂಖ್ಯಾ ನೀತಿಯ ಬಗ್ಗೆ
ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿದ ಭಾಗವತ್, ದೇಶದ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಎಲ್ಲಾ ನಾಗರಿಕರು ಮೂರು ಮಕ್ಕಳನ್ನು ಹೊಂದುವುದು ಉತ್ತಮ ಎಂದರು. ದೇಶ ವಿಭಜನೆಯ ವಿರುದ್ಧ ಆರ್ಎಸ್ಎಸ್ ಪ್ರತಿಭಟಿಸಲಿಲ್ಲ ಎನ್ನುವುದು ತಪ್ಪು ಮಾಹಿತಿ, ಸಂಘವು ತನಗಿದ್ದ ಶಕ್ತಿಯನ್ನು ಬಳಸಿಕೊಂಡು ಪ್ರತಿಭಟನೆ ನಡೆಸಿತ್ತು ಎಂದರು.
ಬಿಜೆಪಿ ನೂತನ ಅಧ್ಯಕ್ಷರ ಬಗ್ಗೆ ಹೇಳಿದ್ದೇನು
ಬಿಜೆಪಿಯ ಹೊಸ ಅಧ್ಯಕ್ಷರನ್ನು ಆಯ್ಕೆಯ ವಿಷಯದಲ್ಲಿನ ವಿಳಂಬದ ಬಗ್ಗೆ ಮಾತನಾಡುತ್ತಾ, ನಿಮ್ಮ ಸಮಯ ತೆಗೆದುಕೊಳ್ಳಿ, ನಾವು ಏನನ್ನೂ ಹೇಳಬೇಕಾಗಿಲ್ಲ. ಒಳ್ಳೆಯ ಕೆಲಸ ಮಾಡಲು ನಮ್ಮ ಸಹಾಯ ಬೇಕಾದರೆ ಬಿಜೆಪಿಗೆ ಮಾತ್ರವಲ್ಲ, ಎಲ್ಲರಿಗೂ ನಾವು ಸಹಾಯ ಮಾಡುತ್ತೇವೆ ಎಂದರು.
ಶತಮಾನೋತ್ಸವದ ಬಗ್ಗೆ ಮೋದಿ ಮಾತು
ಇತ್ತೀಚೆಗೆ ಆರ್ಎಸ್ಎಸ್ ನ ಶತಮಾನೋತಸ್ಸವದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಸಂಘಟನೆ ಹುಟ್ಟಿಕೊಂಡಿತು ಎಂದು ಹೇಳಲು ಸದಾ ಹೆಮ್ಮೆಯಾಗುತ್ತದೆ, ರಾಷ್ಟ್ರಕ್ಕೆ ನೂರು ವರ್ಷಗಳ ಸೇವೆ ಹೆಮ್ಮೆಯ, ಸುವರ್ಣ ಅಧ್ಯಾಯ. ಆರ್ಎಸ್ಎಸ್ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಸಂಕಲ್ಪದೊಂದಿಗೆ ಭಾರತ ಮಾತೆಯ ಕಲ್ಯಾಣದ ಗುರಿಯೊಂದಿಗೆ ನಮ್ಮ ಸ್ವಯಂ ಸೇವಕರು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಪ್ರಧಾನಿ ಹೇಳಿದ್ದರು.










































