ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಸೆ.19ಕ್ಕೆ: ದಿಂಗಾಲೇಶ್ವರ ಸ್ವಾಮೀಜಿ

Picture of Savistara

Savistara

Bureau Report

ಹುಬ್ಬಳ್ಳಿ: ‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಸಮಾಜದಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಲು ಸೆ. 19ರಂದು ನಗರದ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಲಾಗಿದೆ’ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇಯಾಗಿದೆ. ಕೆಲವರು ಇಬ್ಬಾಗ ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿ ಹಾಗೂ ಉಂಟಾಗಿರುವ ಗೊಂದಲ ನಿವಾರಿಸಲು ಸಮಾವೇಶ ಆಯೋಜಿಸಲಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.’ಅರ್ಧ ತಾಸು ಮೆರವಣಿಗೆ ನಡೆಸಲು ಯೋಜಿಸಲಾಗಿದೆ. ಮತ್ತೊಮ್ಮೆ ಮಠಾಧೀಶರ ಸಭೆ ನಡೆಸಿ ಸಮಾವೇಶದ ರೂಪರೇಷೆ ಸಿದ್ಧಪಡಿಸಿ, ಸಮಯ ನಿಗದಿಪಡಿಸಲಾಗುವುದು. ಅಂದು ಹುಬ್ಬಳ್ಳಿ ಸಂಪೂರ್ಣ ಕೇಸರಿಮಯವಾಗಲಿದೆ’ ಎಂದರು.’ಸರ್ಕಾರ ನಡೆಸಲಿರುವ ಜಾತಿಗಣತಿಯಲ್ಲಿ ಲಿಂಗಾಯತ ವೀರಶೈವ ಎಂದೇ ನಮೂದಿಸಬೇಕು. 1904 ರಲ್ಲಿ ಸ್ಥಾಪನೆಯಾದ ವೀರಶೈವ ಲಿಂಗಾಯತ ಮಹಾಸಭಾದ ಅಂದಿನ ನಿಲುವು ಏನಿತ್ತೋ, ಈಗಲೂ, ಮುಂದೂ ಸಹ ಅದೇ ಆಗಿರಲಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂದುದು ಕೆಲವರು, ಬಸವಣ್ಣನವರ ಹೆಸರು ಬಳಕೆ ಮಾಡಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವೀರಶೈವ ಲಿಂಗಾಯತ ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಬಸವಸಂಸ್ಕೃತಿ ಯಾತ್ರೆ ಹೆಸರಲ್ಲಿ ವೈದಿಕ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದಾರೆ. ಆ ಯಾತ್ರೆಯ ನೇತೃತ್ವ ವಹಿಸಿದವರೇ ವೈದಿಕ ಪಾಠಶಾಲೆ ನಡೆಸುತ್ತಿದ್ದಾರೆ. ಅವರ ನಡೆ, ನುಡಿ ಭಿನ್ನವಾಗಿದೆ. ಕಾವಿ ಲೋಕದ ರಾಜಕಾರಣಿಗಳು ಸಮಾಜ ಒಡೆಯುವ ಕುತಂತ್ರ ನಡೆಸಿದ್ದಾರೆ. ಪ್ರತ್ಯೇಕ ಲಿಂಗಾಯತ ಆಗಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು’ ಎಂದು ಹೇಳಿದರು.ಪ್ರಭು ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠ ಸ್ವಾಮೀಜಿ, ಉಪ್ಪಿನಬೆಟಗೇರಿ ಮಠದ ಸ್ವಾಮೀಜಿ, ಜಯಶಾಂತ ಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿ ಉಪಸ್ಥಿತರಿದ್ದರು.

‘ಪೀಠತ್ಯಾಗ ಮಾಡಲಿ’:

‘ಬಸವ ಸಂಸ್ಕೃತಿ ಯಾತ್ರೆಯ ತಂಡ ದುರುದ್ದೇಶ ಇಟ್ಟುಕೊಂಡು ಸಮಾಜಕ್ಕೆ ತಪ್ಪು ಸಂದೇಶ ಸಾರುತ್ತಿದೆ. ಈ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೇಳಿದ್ದರು. ಈಗ ಲಿಂಗಾಯತ ಬಿಟ್ಟು ಬಸವಧರ್ಮ ಎನ್ನುತ್ತಿದ್ದಾರೆ. ಅವರಲ್ಲಿ ಬದ್ಧತೆ ಕೊರತೆಯಿದೆ. ಅವರ ಸುತ್ತ ಇರುವ ಬುದ್ದಿ ಜೀವಿಗಳು ತಮ್ಮದು ಮಠದ ಸಂಸ್ಕೃತಿ ಅಲ್ಲ, ಬಸವ ಸಂಸ್ಕೃತಿ ಎನ್ನುತ್ತಿದ್ದಾರೆ. ಅದೇ ಆಗಿದ್ದರೆ ವೇದಿಕೆಯಲ್ಲಿದ್ದ ಸ್ವಾಮೀಜಿಗಳಿಂದ ಪೀಠತ್ಯಾಗ ಮಾಡಿಸಲಿ. ವೀರಶೈವ ಲಿಂಗಾಯತ ಒಂದೇ ಎನ್ನುವವರು ನಮ್ಮ ಜೊತೆ ಬರಬಹುದು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

[t4b-ticker]
error: Content is protected !!