ಚಿಂತಾಮಣಿ: ‘ಕಲ್ಫ್’ ಸಿನಿಮಾ ಬ್ಯಾನರ್ ತೆರವುಗೊಳಿಸಿದ ಶಿಡ್ಲಘಟ್ಟದ ನಗರಸಭೆ ಆಯುಕ್ತ ಅಮೃತಾ ಗೌಡ ಅವರಿಗೆ ದೂರವಾಣಿಯಲ್ಲಿ ಧಮ್ಮಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜ.22ಕ್ಕೆ ಮುಂದೂಡಲಾಗಿದೆ.
ರಾಜೀವ ಗೌಡ ಪರ ವಕೀಲ ಕೆ.ಎನ್.ಶಿವಶಂಕರರೆಡ್ಡಿ ಚಿಂತಾಮಣಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು, ವಾದ, ವಿವಾದದ ಆಲಿಸಿ ವಿಚಾರಣೆ ಮುಂದೂಡಿದರು.ಶಿಡ್ಲಘಟ್ಟ ನಗರಸಭೆ ಆಯುಕ್ತ ಜಿ.ಅಮೃತಾಗೌಡ ಅವರು ರಾಜೀವಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.ದೂರಿನ ಆಧಾರದ ಮೇಲೆ ಬಿಎನ್ಎಸ್ 2023ರ ಸೆಕ್ಷನ್ 132, 224, 352, 351 (3) ಮತ್ತು 56ರ ಅಡಿ ಪೊಲೀಸರು ಎಫ್ಐಅರ್ ದಾಖಲಿಸಿದ್ದರು. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ರಾಜೀವ ಗೌಡ ತಲೆಮರೆಸಿಕೊಂಡಿದ್ದಾರೆ.












































