ದಾವಣಗೆರೆ: ” ಆಸೆ ಇರೋರು ಈ ಅವಧಿಯಲ್ಲಿಯೇ ಸಿಎಂ ಆಗಬಹುದು, 2028 ರ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ನಾನು ಬೇಡಿಕೆ ಇಡ್ತಿನಿ ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಮುಂದೆ ಕಾಂಗ್ರೆಸ್ ಪಕ್ಷ ಗೆದ್ದರೆ, ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 2028ರ ಸಾರ್ವತ್ರಿಕ ಚುನಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡಲಿದ್ದೇನೆ. ಪ್ರಸಕ್ತ ಅವಧಿಯಲ್ಲಿ ಆಸೆ ಇರುವವರು ಮುಖ್ಯಮಂತ್ರಿ ಆಗಬಹುದು. ಇದಕ್ಕೆ ನನ್ನ ಬೆಂಬಲವೂ ಇದೆ. ಅಭಿಮಾನಿಗಳು ರಾಜ್ಯದ ಎಲ್ಲೆಡೆ ಹೀಗೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಗೊಂದಲ ಆಗುವುದು ಬೇಡ ಎಂದರು.
ಶೀಘ್ರವೇ ಇತ್ಯರ್ಥ ಆಗಬೇಕೆಂಬುದು ಶಾಸಕರ ಅಭಿಪ್ರಾಯ : ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತೆರೆ ಎಳೆಯುವ ಅವಶ್ಯಕತೆ ಇದೆ. ಮುಖ್ಯಮಂತ್ರಿ ಗಾದಿಯ ಕುರಿತಂತೆ ನಡೆಯುತ್ತಿರುವ ಚರ್ಚೆ ಪಕ್ಷದ ನಾಯಕರ ಗಮನದಲ್ಲಿದೆ. ಇದು ಶೀಘ್ರವೇ ಇತ್ಯರ್ಥ ಆಗಬೇಕೆಂಬುದು ಪಕ್ಷದ ಶಾಸಕರ ಅಭಿಪ್ರಾಯವಾಗಿದೆ ಎಂದರು.
ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ”ಡಿಸಿಎಂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಸಹ ಆಗಿದ್ದಾರೆ. ಅವರು ದಿಲ್ಲಿಗೆ ತೆರಳಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ದಿಲ್ಲಿಯ ಕರ್ನಾಟಕ ಭವನವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಹೊಸ ಕಟ್ಟಡ ನಿರ್ಮಾಣದ ವಿಚಾರವಾಗಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದೇನೆ. ಸಿಎಂ ಹುದ್ದೆ ಸಂಬಂಧ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ” ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಲವೇ ಉತ್ತರ ನೀಡಲಿದೆ ಎಂದ ಡಿಕೆ ಶಿವಕುಮಾರ್: ಈ ಬೆಳವಣಿಗೆಗಳ ನಡುವೆ ದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ‘‘ಕಾಲವೇ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಮಯವೇ ಪ್ರತಿಯೊಂದಕ್ಕೂ ಉತ್ತರಿಸುತ್ತದೆ,’’ ಎಂದಿದ್ದಾರೆ.ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ‘‘ಅದನ್ನು ಏಕೆ ಬಹಿರಂಗಗೊಳಿಸಬೇಕು? ನಾವು ಇಲ್ಲಿಗೆ ಬರುವುದೇ ಸರಕಾರದ ಕೆಲಸಕ್ಕೆ, ಪಕ್ಷದ ಕೆಲಸಕ್ಕೆ, ನಮ್ಮ ರಾಜಕೀಯಕ್ಕೆ. ನಾವು ರಾಜಕಾರಣಿಗಳು. ರಾಜಕಾರಣಿಗಳು ಏನು ರಾಜಕಾರಣ ಮಾಡಬೇಕೋ ಅದನ್ನು ಎಲ್ಲರಾಜಕಾರಣಿಗಳು ಮಾಡುತ್ತಾರೆ. ಇದರಲ್ಲಿಏನೂ ತಪ್ಪಿಲ್ಲ. ನಾವುಗಳು ನಮ್ಮ ಅನುಕೂಲಕ್ಕೆ ಯಾರನ್ನು ಭೇಟಿ ಮಾಡಬೇಕೋ ಅವರನ್ನು ಕೇಳಿರುತ್ತೇವೆ. ಭೇಟಿ ಮಾಡುತ್ತೇವೆ. ನೀವು ಏಕೆ ಇದನ್ನು ದೊಡ್ಡದು ಮಾಡುತ್ತೀರಿ,’’ ಎಂದು ಡಿಸಿಎಂ ಪ್ರಶ್ನಿಸಿದರು.












































