ಮುಂಬೈ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಭಾರತೀಯ ಷೇರುಪೇಟೆಗಳು ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಈಕ್ವಿಟಿ ಹೂಡಿಕೆದಾರರ ₹16.32 ಕೋಟಿ ಬಂಡವಾಳ ಕರಗಿದೆ.ಬುಧವಾರವೂ ಕುಸಿತ ಮುಂದುವರಿಸಿದ ಬಿಎಸ್ಇ ಸೆನ್ಸೆಕ್ಸ್ 1,122.66 ಅಂಶಗಳಷ್ಟು ಕುಸಿದು 79,116ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.ದಿನದ ವಹಿವಾಟಿನಲ್ಲಿ 1,795 ಅಂಶಗಳಷ್ಟು ಕುಸಿದು 78,443ಕ್ಕೆ ತಲುಪಿತ್ತು. ಶುಕ್ರವಾರದಿಂದ ಸೆನ್ಸೆಕ್ಸ್ 2,171 ಅಂಶಗಳಷ್ಟು ಕುಸಿದಿದೆ.ಹೋಳಿ ಹಿನ್ನೆಲೆ ಮಂಗಳವಾರ ಷೇರುಪೇಟೆ ರಜೆ ಇದ್ದುದರಿಂದ ಮತ್ತಷ್ಟು ಕುಸಿತ ತಪ್ಪಿದೆ.
‘ಜಾಗತಿಕ ದುರ್ಬಲ ಪ್ರವೃತ್ತಿ ಮತ್ತು ಭೌಗೋಳಿಕ ರಾಜಕೀಯ ಕಳವಳ ಮುಂದುವರಿದಿರುವ ಹಿನ್ನೆಲೆಯಲ್ಲಿ ಬುಧವಾರವೂ ಮಾರುಕಟ್ಟೆ ಕುಸಿತ ಮುಂದುವರಿದಿತ್ತು. ದುರ್ಬಲ ಜಾಗತಿಕ ಪ್ರವೃತ್ತಿಗಳು, ಹೆಚ್ಚಿದ ಕಚ್ಚಾ ತೈಲ ಬೆಲೆ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಸುತ್ತಲಿನ ಅನಿಶ್ಚಿತತೆಯ ನಡುವೆ ಹೂಡಿಕೆದಾರರು ಆತಂಕದಲ್ಲಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂತೆಗೆಯುತ್ತಿದ್ದು, ರೂಪಾಯಿ ಬೆಲೆ ಕುಸಿತವೂ ಹೂಡಿಕೆದಾರರ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿದೆ’ಎಂದು ರೆಲಿಗೇರ್ ಬ್ರೋಕಿಂಗ್ನ ಸಂಶೋಧನಾ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ ಶೇ 1.63ರಷ್ಟು ಏರಿಕೆಯಾಗಿ 82.73 ಡಾಲರ್ಗೆ ತಲುಪಿದೆ.ಸೆನ್ಸೆಕ್ಸ್ ಪಟ್ಟಿಯ ಟಾಟಾ ಸ್ಟೀಲ್ ಶೇ 6.76 ರಷ್ಟು ಕುಸಿದರೆ, ಎಲ್ ಅಂಡ್ ಟಿ ಶೇ. 4.53ರಷ್ಟು ಕುಸಿದಿದೆ. ಬಜಾಜ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎನ್ಟಿಪಿಸಿ, ಇಂಟರ್ಗ್ಲೋಬ್ ಏವಿಯೇಷನ್, ಬಜಾಜ್ ಫಿನ್ಸರ್ವ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸಹ ನಷ್ಟ ಕಂಡಿವೆ.ಭಾರ್ತಿ ಏರ್ಟೆಲ್, ಇನ್ಫೊಸಿಸ್ ಮತ್ತು ಟೆಕ್ ಮಹೀಂದ್ರ ಷೇರುಗಳು ಲಾಭ ಗಳಿಸಿದವು.ಬಿಎಸ್ಇ ಸ್ಮಾಲ್ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ 2.42 ರಷ್ಟು ಕುಸಿದರೆ, ಮಿಡ್ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ 2.10 ರಷ್ಟು ಕುಸಿದಿದೆ.













































