ನವದೆಹಲಿ: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆಉಲ್ಬಣಿಸಿರುವ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಭಾರತದ ವಿಮಾನಯಾನ ಸಂಸ್ಥೆಗಳು ಈವರೆಗೆ ಒಟ್ಟು 4,335 ವಿಮಾನ ಹಾರಾಟಗಳನ್ನು ರದ್ದುಗೊಳಿಸಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.ಪ್ರಶೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಯುಮಾರ್ಗಗಳನ್ನು ಮುಚ್ಚಿರುವುದು ವಿಮಾನ ಸಂಚಾರದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿವರಿಸಿದರು.
ಸಂಘರ್ಷದ ಕಾರಣದಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ 4,335 ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 1,187 ವಿಮಾನಗಳನ್ನು ರದ್ದುಗೊಳಿಸಿವೆ. ನಮಗೆ ವಿಮಾನ ಕಾರ್ಯಾಚರಣೆಯ ಸುರಕ್ಷತೆಯೇ ಅತ್ಯಂತ ಆದ್ಯತೆಯ ವಿಷಯ. ವಾಯುಮಾರ್ಗ ಮುಚ್ಚಿರುವಾಗ ಆ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಯಾಣಿಕರ ಸಂಚಾರ: ಈ ಬಿಕ್ಕಟ್ಟಿನ ನಡುವೆಯೂ ಲಭ್ಯವಿದ್ದಸಮಯದ ಸ್ಲಾಟ್ಗಳನ್ನು ಬಳಸಿಕೊಂಡು ಸುಮಾರು 2,19,780 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಿರಂತರವಾಗಿ ಸಂಬಂಧಿತ ದೇಶಗಳ ನಿಯಂತ್ರಕರೊಂದಿಗೆ ಸಂಪರ್ಕದಲ್ಲಿದೆ.ವಾಯುಮಾರ್ಗಗಳು ಸುರಕ್ಷಿತವಾಗಿವೆ ಎಂದು ಖಚಿತಪಟ್ಟ ನಂತರವಷ್ಟೇ ಪೂರ್ಣ ಪ್ರಮಾಣದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.













































