ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದು, ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದು ಇತಿಹಾಸ ಬರೆದಿರುವ ಸಿಪಿಐ(ಎಂ) ನೇತೃತ್ವದ ಎಡರಂಗಕ್ಕೆ ಈ ಬಾರಿ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಅದರ ಮೊದಲ ಭಾಗವಾಗಿ, ಕಾಂಗ್ರೆಸ್ ಹೈಕಮಾಂಡ್ 55 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (Kerala Congress First List) ಬಿಡುಗಡೆ ಮಾಡಿದ್ದು, ಘಟಾನುಘಟಿ ನಾಯಕರನ್ನು ಅಖಾಡಕ್ಕಿಳಿಸಿದೆ.
ಯಾರಿಗೆ ಎಲ್ಲಿ ಟಿಕೆಟ್?
1. ವಿ.ಡಿ. ಸತೀಶನ್: ಪ್ರತಿಪಕ್ಷ ನಾಯಕ ಸತೀಶನ್ ತಮ್ಮ ಭದ್ರಕೋಟೆಯಾದ ಪರವೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ.
2. ರಮೇಶ್ ಚೆನ್ನಿತ್ತಲ: ಹಿರಿಯ ನಾಯಕ ಚೆನ್ನಿತ್ತಲ ಹರಿಪಾದ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸಲಿದ್ದಾರೆ.
3. ಚಾಂಡಿ ಉಮ್ಮನ್: ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ತಮ್ಮ ತಂದೆಯ ಕರ್ಮಭೂಮಿ ಪುತ್ತುಪ್ಪಳ್ಳಿಯಿಂದ ಕಣಕ್ಕಿಳಿಯುತ್ತಿದ್ದಾರೆ.
4. ಕೆ. ಮುರಳೀಧರನ್: ಪ್ರಭಾವಿ ನಾಯಕ ಮುರಳೀಧರನ್ ವಟ್ಟಿಯೂರ್ಕಾವು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದ ರಮ್ಯಾ ಹರಿದಾಸ್ ಚಿರಾಯಿಂಕೀಝು ಟಿಕೆಟ್ ನೀಡಲಾಗಿದೆ.
5. ನಟ ರಮೇಶ್ ಪಿಶಾರೋಡಿಗೆ ಪಾಲಕ್ಕಾಡ್ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.
ಕಳೆದ ಚುನಾವಣೆಯ ಫಲಿತಾಂಶ
ಕೇರಳದ ಇತಿಹಾಸದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಸಂಪ್ರದಾಯವಿತ್ತು. ಆದರೆ, 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ (LDF) 140 ಸದಸ್ಯರ ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುವ ಮೂಲಕ ಈ ಸಂಪ್ರದಾಯವನ್ನು ಮುರಿದಿತ್ತು. ಕಾಂಗ್ರೆಸ್ ಕೇವಲ 21 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಈ ಬಾರಿ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕೈ ಪಡೆ ಸಂಘಟಿತ ಹೋರಾಟಕ್ಕೆ ಮುಂದಾಗಿದೆ.
ತ್ರಿಕೋನ ಸ್ಪರ್ಧೆಯ ನಿರೀಕ್ಷೆ
ಕಳೆದ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನ ಗೆಲ್ಲದಿದ್ದರು ಕೂಡ ಗಣನೀಯವಾಗಿ ಮತ ಗಳಿಕೆಯಲ್ಲಿ ಏರಿಕೆ ಕಂಡಿತ್ತು. ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇರುವುದರಿಂದ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾಗರೂಕತೆ ವಹಿಸಿದೆ. ಧರ್ಮಡಂನಲ್ಲಿ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಅಬ್ದುಲ್ ರಶೀದ್ರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ನೇರ ಸವಾಲು ಎಸೆದಿದೆ













































