ಮಂಗಳೂರು: ಅಡುಗೆ ಅನಿಲ ಸಿಲಿಂಡರ್ ಪೂರೈಕೆ ವ್ಯತ್ಯಯದ ಲಾಭವನ್ನು ಸೈಬರ್ ಅಪರಾಧಿಗಳು ಬಳಸಿಕೊಳ್ಳಲು ಆರಂಭಿಸಿದ್ದು, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಸೂಚಿಸಿದೆ.ನಕಲಿಗ್ಯಾಸ್ಬುಕಿಂಗ್ ಲಿಂಕ್, ವೆಬ್ಸೈಟ್ ಸೃಷ್ಟಿಸಿ, ಸಾರ್ವಜನಿಕರು ಸಿಲಿಂಡರ್ ಬುಕಿಂಗ್ ಮಾಡುವಂತೆ ಹಾಗೂ ಮುಂಗಡವಾಗಿ ಹಣ ಪಾವತಿಸುವಂತೆ ತಿಳಿಸಲಾಗುತ್ತದೆ. ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿದುಕೊಂಡು ಮೋಸ ಮಾಡಲಾಗುತ್ತದೆ. ಆದ್ದರಿಂದ ಮೊಬೈಲ್ ಗೆ ಬರುವ ಯಾವುದೇ ನಕಲಿ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ಅಧಿಕೃತ ವೆಬ್ಸೈಟ್ಗಳಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ಗಳನ್ನು ಬುಕಿಂಗ್ ಮಾಡಬೇಕು. ನೋಂದಣಿ ಮಾಡಿಕೊಡುವ ಹೆಸರಿನಲ್ಲಿ ಸೈಬರ್ ವಂಚಕರು ಯತ್ನಿಸುತ್ತಿರುವುದು ಪತ್ತೆಯಾಗಿದೆ. ಅಪರಿಚಿತ ಸಂಖ್ಯೆಯಿಂದ ಕರೆಮಾಡುವ ವಂಚಕರು ಅಡುಗೆ ಅನಿಲ ಸಿಲಿಂಡರ್ ನೋಂದಣಿ, ನವೀಕರಣ, ಕೆವೈಸಿ ಪರಿಶೀಲನೆ ಮೊದಲಾದ ಕಾರಣ ನೀಡಿ ಗ್ರಾಹಕರನ್ನು ಭಯಪಡಿಸುತ್ತಾರೆ. ನಂತರ ಬ್ಯಾಂಕ್ ಖಾತೆ ವಿವರ, ಡೆಬಿಟ್ ಕಾರ್ಡ್ ಸಂಖ್ಯೆ, ಒಟಿಪಿ ಅಥವಾ ಮೊಬೈಲ್ಗೆ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಲು ಹೇಳಿ ಹಣ ಪಡೆದು ವಂಚಿಸುತ್ತಾರೆ. ಜಿಲ್ಲೆಯಲ್ಲಿ ಇಂತಹ ಹಲವು ದೂರುಗಳು ದಾಖಲಾಗಿದ್ದು, ಕೆಲವು ಮಂದಿ ಸಾವಿರಗಳಿಂದ ಲಕ್ಷ ರೂ.ವರೆಗೆ ಹಣ ಕಳೆದುಕೊಂಡಿರುವ ಪ್ರಕರಣಗಳೂ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.
ಏನೆಲ್ಲ ಎಚ್ಚರಿಕೆ ವಹಿಸಬೇಕು?
ಗ್ಯಾಸ್ ಕಂಪನಿಯ ಹೆಸರಿನಲ್ಲಿ ಬರುವ ಅನುಮಾನಾಸ್ಪದ ಕರೆ ಅಥವಾ ಸಂದೇಶಗಳಿಗೆ ಸ್ಪಂದಿಸಬಾರದು. ಬ್ಯಾಂಕ್ ವಿವರ, ಒಟಿಪಿ ಪಾಸ್ವರ್ಡ್ ಇತ್ಯಾದಿ ಮಾಹಿತಿಯನ್ನು ಯಾರಿಗೂ ನೀಡಬಾರದು. =ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು ವಂಚನೆ ನಡೆದರೆ ತಕ್ಷಣ ಸೈಬರ್ ಕೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಬೇಕು.
ಪ್ರಸ್ತುತ ಅಡುಗೆ అనిల ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರ ಲಾಭವನ್ನು ವಂಚಕರು ಪಡೆಯಲು ಯತ್ನಿಸುತ್ತಿದ್ದಾರೆ. ನಕಲಿ ವೆಬ್ಸೈಟ್ಗಳಲ್ಲಿ ಸಿಲಿಂಡರ್ ಬುಕ್ ಮಾಡಿ ಹಣ ಪಾವತಿಸಬೇಡಿ. ಯಾವುದೇ ಕೆಲಸ ಮಾಡುವುದಿದ್ದರೂ ಯೋಚಿಸಿ ಮುಂದುವರಿಯಿರಿ.
| ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು ನಗರ ಪೊಲೀಸ್ ಆಯುಕ್ತ













































