ಬೈಂದೂರು: ಇಲ್ಲಿನ ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಶಾಲೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶದ ರೂವಾರಿ ಎನ್ನಲಾದ ಪ್ರಾಂಶುಪಾಲೆ ಜಯಂತಿ ಅವರ ಕಾಲಿಗೆರಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಗೌರವಿಸಿದರು.ಕಳೆದ ವರ್ಷ ಶೇ.35ರಷ್ಟು ಫಲಿತಾಂಶವಿದ್ದ ಶಾಲೆ ಈ ಬಾರಿ ಶೇ. 94ರಷ್ಟು ಫಲಿತಾಂಶ ಗಳಿಸಿದೆ.

ಕಳೆದ ವರ್ಷ ಶಾಸಕ ಗುರುರಾಜ್ ಗಂಟಿಹೊಳೆ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು ಕಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದರು.ಶನಿವಾರ ಶಾಲೆಗೆ ಭೇಟಿ ನೀಡಿದ ಶಾಸಕರು ಭಾವುಕರಾಗಿ ಶಿರಬಾಗಿದರು. ಇದನ್ನು ಕಂಡು ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾದವು.’ಸೋತಾಗ ಎಚ್ಚರಿಸುವ ಕೆಲಸ ಆಗಬೇಕು.

ಬದಲಾವಣೆಯ ಉದ್ದೇಶದಿಂದಲೇ ಕಳೆದ ಬಾರಿ ಟೀಕೆ ಮಾಡಿದ್ದೆ. ಜಯಂತಿ ಟೀಚರ್ ಮತ್ತು ತಂಡದವರು ಆ ಸವಾಲನ್ನು ಗೆದ್ದಿದ್ದಾರೆ’ ಎಂದು ಶಾಸಕರು ಹೇಳಿದರು. ಶಾಸಕರ ಕಾಳಜಿಗೆ ಜಯಂತಿ ಟೀಚರ್ ಕೂಡ ಕಣ್ಣೀರಾದರು.












































