ಸುಬ್ರಹ್ಮಣ್ಯ ಮೇ 03 : ನಿರಂತರವಾಗಿ ರಜೆಯ ಕಾರಣದಿಂದ ಹಾಗೂ ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು(ಏ.03) ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಭಕ್ತರ ಸುಗಮಾ ದರ್ಶನಕ್ಕಾಗಿ ಶ್ರೀ ದೇವಳದ ವತಿಯಿಂದ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಭದ್ರತಾ ಸಿಬ್ಬಂದಿಗಳು, ಪೊಲೀಸ್ ನವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು ಕಂಡು ಬಂತು. ದೇವಳದ ಸುತ್ತಮುತ್ತಲಿನ ವಾಹನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ತುಂಬಿದ್ದು, ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಪ್ರಮೇಯ ಕೂಡ ಬಂದಿತ್ತು. ಭಕ್ತರಿಗೆ ಬೆಳಗಿನ ಉಪಹಾರ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಈ ದೇವಾಲಯದಿಂದ ವ್ಯವಸ್ಥೆಗೊಳಿಸಲಾಗಿತ್ತು. ಮಧ್ಯಾಹ್ನದ ಭೋಜನಕ್ಕಾಗಿ ಬಫೆ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿತ್ತು. ವಿಪರೀತ ಸೆಖೆ ಹಿನ್ನೆಲೆಯಲ್ಲಿ ಭಕ್ತರು ವೇಗವಾಗಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹಿಂದಿರುಗುತ್ತಿದ್ದದ್ದು ಕಂಡು ಬಂತು. ಸರ್ಪಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಸೇವೆಗಳನ್ನು ಸಲ್ಲಿಸುವ ಭಕ್ತರು ಹಿಂದಿನ ದಿನವೇ ಬಂದು ಶ್ರೀ ದೇವಳದ ವಸತಿಗೃಹ ಹಾಗೂ ಖಾಸಗಿ ವಸತಿ ಗೃಹಗಳಲ್ಲಿ ತಂಗಿದ್ದರು. ಎಲ್ಲ ಶ್ರೀ ದೇವಳ ಹಾಗೂ ಖಾಸಗಿ ವಸತಿಗೃಹಗಳು ಕೂಡ ಶನಿವಾರ, ಆದಿತ್ಯವಾರ ತುಂಬಿದ್ದವು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು; ರಜೆ ಹಿನ್ನೆಲೆ ಭಾರಿ ಜನಸಂದಣಿ
Savistara
Bureau Report
[t4b-ticker]













































