ಅಯೋಧ್ಯ (ಉತ್ತರ ಪ್ರದೇಶ): ರಾಮ ಮಂದಿರಕ್ಕೆ ನೀಡಲಾಗಿದ್ದದೇಣಿಗೆ ಹಣ, ಕಾಣಿಕೆ ದುರ್ಬಳಕೆ ಆರೋಪದಡಿ ಎಫ್ಐಆರ್ನಲ್ಲಿ ಹೆಸರು ಉಲ್ಲೇಖಿಸಲಾಗಿದ್ದ ಎಲ್ಲ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿದ್ದ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ಆಧರಿಸಿ ಈ ಬಂಧನ ಮಾಡಲಾಗಿದೆ. ಬಂಧಿತ ಎಂಟೂ ಮಂದಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಅವಿನಾಶ್ ಶುಕ್ಲಾ, ಅನುಕಲ್ಸ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಶ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ದೇಗುಲಕ್ಕೆ ಬರುವ ಹಣ ಮತ್ತು ಕಾಣಿಕೆಗಳ ಎಣಿಕೆ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.’ಬಂಧಿತ ಆರೋಪಿಗಳೆಲ್ಲ ಸದ್ಯ ಅಯೋಧ್ಯೆಯಲ್ಲೇ ಇದ್ದು, ಹೆಚ್ಚುವರಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 306 (ಗುಮಾಸ್ತ ಅಥವಾ ಸೇವಕನಿಂದ ಆಸ್ತಿಯ ಕಳ್ಳತನ), 316 (ಕ್ರಿಮಿನಲ್ ನಂಬಿಕೆ ದ್ರೋಹ), 317 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಪಡೆಯುವುದು) ಮತ್ತು 61 (ಕ್ರಿಮಿನಲ್ ಪಿತೂರಿ) ಸೇರಿದಂತೆ ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ರಾಮ ಮಂದಿರ ದೇಣಿಗೆ ದುರುಪಯೋಗ ಸಂಬಂಧ ಜೂನ್ 7ರಿಂದ ಆರೋಪ ಕೇಳಿಬರುತ್ತಿದ್ದವು. ಈ ಸಂಬಂಧ ತನಿಖೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಅಲ್ಲದೇ, ವದಂತಿಗಳಿಗೆ ಕಿವಿಗೊಡದೆ ತನಿಖಾ ವರದಿ ಬರುವವರೆಗೂ ಕಾಯುವಂತೆ ರಾಮ ಭಕ್ತರಿಗೆ ಮನವಿ ಮಾಡಿತ್ತು.ಎಸ್ಐಟಿಯ ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್ಐಆರ್ ದಾಖಲಾಗಿತ್ತು. ಬಳಿಕ, ಎಲ್ಲ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ದುರುಪಯೋಗದ ಆರೋಪ ಮಾಡಿದಾಗಿನಿಂದ ಆರೋಪಿಗಳ ಹೆಸರುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಿರೋಧ ಪಕ್ಷಗಳ ನಾಯಕರು ಮತ್ತು ಬಿಜೆಪಿ ಮುಖಂಡರು ಸಹ ಈ ಕುರಿತಂತೆ ತನಿಖೆಗೆ ಒತ್ತಾಯಿಸಿದ್ದರು.
ಸುಭಾಶ್ ಚಂದ್ರ ಶ್ರೀವಾಸ್ತವ ಅವರು ನಗದು ಎಣಿಕೆ ಸಿಬ್ಬಂದಿಯ ನೇತೃತ್ವ ವಹಿಸಿದ್ದರು. ಉಳಿದ ಆರೋಪಿಗಳು ನಗದು, ಕಾಣಿಕೆಗಳ ಎಣಿಕೆಯ ಹೊಣೆ ಹೊತ್ತಿದ್ದರು.ಬಂಧಿತರಲ್ಲಿ ಒಬ್ಬರಾದ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಕಾರಿನ ಮಾಜಿ ಡ್ರೈವರ್ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.











































