ಅಯೋಧ್ಯೆ ರಾಮ ಮಂದಿರ ದೇಣಿಗೆ ವಿಚಾರ | ಸನಾತನ ಧರ್ಮದ ನಂಬಿಕೆ ಜೊತೆ ಆಟವಾಡಿದರೆ ಮುಂದಿನ ಪರಿಣಾಮ ಎದುರಿಸಲು ಸಜ್ಜಾಗಿ ಯುಪಿ ಸಿಎಂ ಯೋಗಿ ಖಡಕ್ ವಾರ್ನಿಂಗ್

Picture of Savistara

Savistara

Bureau Report

ಲಖನೌ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಬಂದ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣದ 8 ಮಂದಿ ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಧರ್ಮ ಹಾಗೂ ಸಾರ್ವಜನಿಕರ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.’ಅಯೋಧ್ಯೆಯು ಸಾರ್ವಜನಿಕರ ಮತ್ತು ಸನಾತನ ಧರ್ಮದ ಅಪಾರ ನಂಬಿಕೆಯ ಸಂಕೇತವಾಗಿದೆ. ಯಾರೂ ಅಯೋಧ್ಯೆಯತ್ತ ವಕ್ರದೃಷ್ಟಿ ಬೀರಬಾರದು. ಶ್ರೀರಾಮನನನ್ನು ಗೌರವಿಸುವುದನ್ನು ಕಲಿಯಿರಿ. ಈ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಮತ್ತು ಅದರ ವರದಿ ಬಂದ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ನಾವು ಮೊದಲೇ ಹೇಳಿದ್ದೆವು’ ಎಂದು ನೆನಪಿಸಿದರು.ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯ ಬೆನ್ನಲ್ಲೇ ಆರೋಪಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಯೋಗಿ ತಿಳಿಸಿದರು.

‘ನಾನು ನಿಮಗೆ ಭರವಸೆ ನೀಡುತ್ತೇನೆ. ಈ ಪ್ರಕರಣದಲ್ಲಿ ಸತ್ಯ ಮತ್ತು ಸುಳ್ಳನ್ನು ನಾವು ಸಂಪೂರ್ಣವಾಗಿ ಬೇರ್ಪಡಿಸಿ ಸಾರ್ವಜನಿಕರ ಮುಂದೆ ಇಡಲಿದ್ದೇವೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಯಾರೇ ಆಗಲಿ ಸನಾತನ ಧರ್ಮದ ಪವಿತ್ರ ನಂಬಿಕೆಯನ್ನು ಕೆಡಿಸಲು ಅಥವಾ ಅದರೊಂದಿಗೆ ತಮಾಷೆ ಮಾಡಲು ಯತ್ನಿಸಿದರೆ, ಅವರು ಅದರ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂತಹ ದೇಶದ್ರೋಹಿ ಮತ್ತು ಧರ್ಮದ್ರೋಹಿ ಕೆಲಸ ಮಾಡುವ ಯಾರಿಗೇ ಆದರೂ ಯಾವುದೇ ರೀತಿಯ ವಿನಾಯಿತಿಯನ್ನು ನೀಡಲು ಸಾಧ್ಯವೇ ಇಲ್ಲ’ ಎಂದು ಅವರು ಎಚ್ಚರಿಸಿದ್ದಾರೆ.

[t4b-ticker]
error: Content is protected !!