ಅಯೋಧ್ಯೆ: ರಾಮಮಂದಿರ ದೇಣಿಗೆ ದುರಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಂಟು ಆರೋಪಿಗಳನ್ನು ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಎಂದು ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳನ್ನು ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ನಂತರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ಕೆ. ಸಿ. ವರ್ಮಾ ಅವರು ತಿಳಿಸಿದ್ದಾರೆ.ಬಂಧಿತರನ್ನು ಅವಿನಾಶ್ ಶುಕ್ಲಾ, ಅನುಕಲ್ಸ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಮಾಶಂಕರ್ ಅಲಿಯಾಸ್ ಟಿನ್ನು ಯಾದವ್ ಎಂದು ಗುರುತಿಸಲಾಗಿದೆ.ಆರೋಪಿಗಳಿಂದ ₹79.85 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಐದರಿಂದ ಆರು ಮಂದಿ ಬ್ಯಾಂಕ್ ನೌಕರರಾಗಿದ್ದು, ದೇವಾಲಯಕ್ಕೆ ಬಂದ ನಗದು ದೇಣಿಗೆಯನ್ನು ಎಣಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು ಮತ್ತು ಬ್ಯಾಂಕ್ನಿಂದ ಸಂಬಳ ಪಡೆಯುತ್ತಿದ್ದರು ಎಂದು ವರ್ಮಾ ತಿಳಿಸಿದ್ದಾರೆ.
ಟಿನ್ನು ಯಾದವ್ ಬ್ಯಾಂಕ್ ನೌಕರನಲ್ಲ. ಬದಲಾಗಿ, ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಸುಭಾಷ್ ಶ್ರೀವಾಸ್ತವ ದೇಣಿಗೆ ಎಣಿಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದ ಎಂದು ವರ್ಮಾ ವಿವರಿಸಿದ್ದಾರೆ.ರಾಮಮಂದಿರದಲ್ಲಿ ಭಕ್ತರು ಅರ್ಪಿಸಿದ ನಗದು ಮತ್ತು ಬೆಲೆಬಾಳುವ ವಸ್ತುಗಳ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ವಿಶೇಷ ತನಿಖಾ ತಂಡದ (ಎಸ್ಐಟಿ) ಪ್ರಾಥಮಿಕ ವರದಿಯ ನಂತರ ಎಫ್ಐಆರ್ ದಾಖಲಾಗಿದ್ದು, ಎಸ್ಐಟಿ ಮತ್ತು ಅಯೋಧ್ಯೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.










































