ನವದೆಹಲಿ: ‘ವಂದೇ ಮಾತರಂ ದೇಶಭಕ್ತಿ ಗೀತೆಯಷ್ಟೇ ಅಲ್ಲ.ಅದು ಭಾರತದ ಪುನರ್ ನಿರ್ಮಾಣದ ಮಂತ್ರವಾಗಿದ್ದು, ಭಾರತ ಮಾತೆಯನ್ನು ಜಗತ್ತಿನ ಅತ್ಯುನ್ನತ ಸ್ಥಾನದಲ್ಲಿ ಪುನರ್ ಸ್ಥಾಪಿಸುವ ಮಾರ್ಗವೂ ಆಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ನಾರ್ಕೋ-ಕೋಆರ್ಡಿನೇಷನ್ ಸೆಂಟರ್ನ (ಎನ್ಸಿಒಆಆರ್ಡಿ) 10ನೇ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನವಾದ ಈ ದಿನ (ಜೂನ್ 26) ದೇಶದ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಮಹತ್ವದಾಗಿದೆ ಎಂದಿದ್ದಾರೆ.’ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಬ್ರಿಟೀಷ್ ಆಳ್ವಿಕೆಯಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ರಚಿಸಿದ ‘ವಂದೇ ಮಾತರಂ’ ಗೀತೆಯು ದೇಶದ ಸಾಂಸ್ಕೃತಿಕ ಪ್ರಜ್ಞೆ ಮತ್ತು ದೇಶಭಕ್ತಿಯ ಪ್ರಭಲ ಸಂಕೇತವಾಗಿತ್ತು. ಸ್ವತಂತ್ರ್ಯ ಹೋರಾಟದ ಉತ್ತುಂಗದಲ್ಲಿ ಬ್ರಿಟೀಷರ ವಿರುದ್ಧದ ಮುಖ್ಯ ಘೋಷಣೆ ‘ವಂದೇ ಮಾತರಂ’ ಆಗಿತ್ತು’ ಎಂದು ಶಾ ವಿವರಿಸಿದ್ದಾರೆ.’ಅನೇಕ ಕ್ರಾಂತಿಕಾರಿಗಳು ‘ವಂದೇ ಮಾತರಂ’ ಘೋಷಣೆಯೊಂದಿಗೆ ಗಲ್ಲಿಗೇರಿದ್ದರು ಎಂದು ಸ್ವಾತಂತ್ರ್ಯ ಹೊರಾಟಗಾರರ ತ್ಯಾಗವನ್ನು ಈ ಸಂದರ್ಭದಲ್ಲಿ ಶಾ ಸ್ಮರಿಸಿದ್ದಾರೆ. ವಂದೇ ಮಾತರಂ ಕೇವಲ ಸ್ವಾತಂತ್ರ್ಯ ಚಳುವಳಿಯನ್ನು ಪರಿಚಯಿಸುವ ಹಾಡು ಮಾತ್ರವಲ್ಲ ಎಂದೂ ಅವರು ಒತ್ತಿ ಹೇಳಿದ್ದಾರೆ.
‘ಮಾದಕ ವಸ್ತು ಮುಕ್ತ ಭಾರತ’ ಗುರಿ ಸಾಧಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಬಲಪಡಿಸುವ ಕುರಿತು ಚರ್ಚಿಸಲು, 44 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು ಹಾಗೂ ಮಾದಕ ದ್ರವ್ಯ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳನ್ನು ಈ ಸಭೆಯು ಹೈಬ್ರಿಡ್ ಮಾದರಿಯಲ್ಲಿ ಒಟ್ಟುಗೂಡಿಸಿತ್ತು.










































