ಮಂಗಳೂರು: ಮತದಾರರ ಪಟ್ಟಿಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಹೆಸರು ವ್ಯತ್ಯಾಸವಾಗಿದ್ದ ಕಾರಣ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕೃತ ಸ್ಪಷ್ಟನೆ ನೀಡಿದ್ದು ಸಮಸ್ಯೆ ಸಂಪೂರ್ಣವಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಹೊಂದಾಣಿಕೆ ಆಗದಿರುವುದು ಕಂಡುಬಂದಿತ್ತು. ಅವರ ಹೆಸರನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಖುದ್ದು ಅವರ ಮನೆಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ಪರಿಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗೊಂದಲಕ್ಕೆ ತೆರೆ: ಮತದಾರರ ಪಟ್ಟಿಯ ಪರಿಶೀಲನೆ ವೇಳೆ ಹಳೆಯ ದಾಖಲೆಗಳಲ್ಲಿದ್ದ ‘ಹಾಜಬ್ಬ’ ಮತ್ತು ಪ್ರಸ್ತುತ ದಾಖಲೆಗಳಲ್ಲಿದ್ದ ‘ಹರೇಕಳ ಹಾಜಬ್ಬ’ ಹೆಸರಿನ ವ್ಯತ್ಯಾಸದಿಂದಾಗಿ ನೋಟಿಸ್ ಜಾರಿಯಾಗಿ ಚರ್ಚೆಗೆ ಕಾರಣವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಹಾಜಬ್ಬ ಅವರ ಮನೆಗೇ ತೆರಳಿ ತಮ್ಮಿಂದಾದ ತಪ್ಪನ್ನು ಸರಿಪಡಿಸಿದ್ದರು. ಇದೀಗ ಜಿಲ್ಲಾಡಳಿತವೇ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ಪೂರ್ಣವಿರಾಮ ಇಟ್ಟಿದೆ.
















































