ರಾಮನಗರ: ಈ ಬಾರಿ ವಾರಂತ್ಯಕ್ಕೆ ಹೊಂದಿಕೊಂಡಂತೆ ಗೌರಿ-ಗಣೇಶ ಹಬ್ಬ ಬಂದಿರುವುದರಿಂದ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಶನಿವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ವಾಹನಗಳ ದಟ್ಟಣೆ ಕಂಡುಬಂತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಟೋಲ್ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ಗಳಲ್ಲಿ ಬೆಳಿಗ್ಗೆ ಮೈಸೂರು ಕಡೆಗೆ ಹೋಗುವ ವಾಹನಗಳು ಟೋಲ್ ದಾಟಲು ಕಿಲೋಮೀಟರ್ನಷ್ಟು ದೂರ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.ಎರಡೂ ಟೋಲ್ಗಳಲ್ಲಿ ಫಾಸ್ಟ್ಟ್ಯಾಗ್ ವ್ಯವಸ್ಥೆ ಜೊತೆಗೆ ಏಳೆಂಟು ಟೋಲ್ ಗೇಟ್ಗಳಿದ್ದರೂ, ಮೈಸೂರು ಕಡೆಗೆ ಹೋಗುವ ವಾಹನಗಳು ಅತಿ ಹೆಚ್ಚಾಗಿ ಇದ್ದಿದ್ದರಿಂದ ವಾಹನಗಳು ಟೋಲ್ ದಾಟುವುದು ವಿಳಂಬವಾಯಿತು. ಇದರಿಂದಾಗಿ ಬೆಳಿಗ್ಗೆಯೇ ಹೊರಟು ಬೇಗನೆ ಊರು ಸೇರಿಕೊಳ್ಳಬೇಕು ಅಂದುಕೊಂಡಿದ್ದವರು ಟೋಲ್ ಬಳಿ ಕಾಯಬೇಕಾಯಿತು.’ವಾರಂತ್ಯಕ್ಕೆ ಹೊಂದಿಕೊಂಡಂತೆ ಹಬ್ಬ-ಹರಿದಿನಗಳು ಬಂದರೆ ಹಾಗೂ ದಸರಾ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಲ್ಲಿ ಯಾವಾಗಲೂ ದಟ್ಟಣೆ ಇದ್ದೇ ಇರುತ್ತದೆ. ನಾವು ಎಷ್ಟೇ ಬೇಗ ಹೋಗಬೇಕು ಅಂದುಕೊಂಡರೂ ಟೋಲ್ ಬಳಿ ಸಿಲುಕಿಕೊಳ್ಳುತ್ತೇವೆ’ ಎಂದು ಮೈಸೂರು ಕಡೆಗೆ ಕಾರಿನಲ್ಲಿ ಹೊರಟಿದ್ದ ಪ್ರಯಾಣಿಕ ಅವಿನಾಶ್ ಹೇಳಿದರು.
‘ಯಾವುದೇ ಟೋಲ್ ತಲೆ ಬಿಸಿ ಇಲ್ಲದೆ ಸರ್ವಿಸ್ ರಸ್ತೆಯಲ್ಲಿ ಹೋಗೋಣವೆಂದರೆ ಹೆದ್ದಾರಿಗೆ ಹೊಂದಿಕೊಂಡಂತೆ ಸಂಪೂರ್ಣವಾಗಿ ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಹಲವೆಡೆ ಹೆದ್ದಾರಿ ಪಕ್ಕದ ಪಟ್ಟಣ ಅಥವಾ ನಗರಗಳನ್ನು ಬಳಸಿಕೊಂಡು ಹೋಗಬೇಕು. ಹಾಗಾಗಿ ವಿಧಿ ಇಲ್ಲದೆ ಟೋಲ್ ರಸ್ತೆಯಲ್ಲೇ ಹೋಗಬೇಕಾಗಿದೆ. ಆದರೆ, ಹಬ್ಬ-ಹರಿದಿನಗಳಲ್ಲಿ ಟೋಲ್ ಕೇಂದ್ರದ ಬಳಿಯೇ ಸಂಚಾರ ದಟ್ಟಣೆ ಉಂಟಾಗಿ ತಡವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

















































