ನಿನ್ನೆ ಸೆಪ್ಟೆಂಬರ್ 11ರಂದು ಪ್ರವಾದಿಯವರ ಜನ್ಮದಿನದ ಅಂಗವಾಗಿ ಕಾಲ್ನಡಿಗೆ ಜಾಥಾ ಹಾಗೂ ದಫ್ ಪ್ರದರ್ಶನ ಸುಳ್ಯದಲ್ಲಿ ನಡೆದಿದ್ದು ಕೇವಲ 500ರಷ್ಟಿದ್ದ ಜನರ ಪ್ರದರ್ಶನಕ್ಕೆ ಮುಖ್ಯ ರಸ್ತೆ ಇಡೀ ಬ್ಲಾಕ್ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಖಂಡಿಸಿದ್ದಾರೆ.
4ಗಂಟೆಗೆ ನಿಗದಿಯಾಗಿದ್ದ ಮೆರವಣಿಗೆಯು 7.30ರ ತನಕವು ಮುಂದುವರಿದಿದ್ದು ಮುಖ್ಯರಸ್ತೆಯನ್ನು ಪೂರ್ತಿ ದಪ್ ನೃತ್ಯದ ಹೆಸರಿನಲ್ಲಿ ಬ್ಲಾಕ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ವಿಪರೀತ ತೊಂದರೆ ಯಾಗಿದ್ದು ಹಳ್ಳಿಯ ವಿದ್ಯಾರ್ಥಿಗಳು ಮನೆ ತಲುಪುವಾಗ ತುಂಬಾ ಕತ್ತಲಾಗಿದ್ದು ಪೋಷಕರು ಆತಂಕ ಪಡುವಂತಾಗಿದೆ.
ರಸ್ತೆ ತುಂಬಾ ದಫ್ ಕುಣಿತದ ಹೆಸರಿನಲ್ಲಿ ಜನ ಆವರಿಸಿ ವಾಹನಗಳು ಚಲಾಯಿಸಲಾಗದಂತಹ ಪರಿಸ್ಥಿತಿ ಉಂಟಾಗಿದ್ದರೂ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಮೆರವಣಿಗೆ ಗೆ ಪೊಲೀಸ್ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದಿದ್ದು, ಯಾವುದೇ ಮುನ್ಸೂಚನೆ ಇಲ್ಲದ ಈ ರಸ್ತೆ ತಡೆಯಿಂದಾಗಿ ಸಾರ್ವಜನಿಕರು ಸಂಕಷ್ಟ ಪಡುವಂತಾಯಿತು.
ಹಿಂದೂ ಉತ್ಸವಗಳ ಸಂದರ್ಭದಲ್ಲಿ, ಮೆರವಣಿಗೆ ಸಮಯದಲ್ಲಿ ಹತ್ತಾರು ನಿಯಮಗಳನ್ನು ಹೇರಿ ಹಿಂಸೆ ನೀಡುವ ಪೊಲೀಸ್ ಮೇಲಧಿಕಾರಿಗಳು ಈ ರೀತಿ ರಸ್ತೆ ಸಂಪೂರ್ಣ ಬ್ಲಾಕ್ ಮಾಡಿ ನೃತ್ಯ ಮಾಡುವುದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಒಟ್ಟಾರೆಯಾಗಿ ಇದು ರಾಜ್ಯ ಸರಕಾರದ ತುಷ್ಟಿಕರಣ ನೀತಿಯ ಪರಿಣಾಮವಾಗಿದ್ದು, ಇಲಾಖೆಯು ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವಂತಿದೆ. ಇಲಾಖೆಯು ಈ ರೀತಿಯ ದ್ವಂದ್ವ ನೀತಿಯನ್ನು ಕೈಬಿಟ್ಟು ನಿಯಮ ಮೀರಿ ನಿನ್ನೆಯ ದಿನ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ದ ಕಾನೂನು ರೀತ್ಯಾ ಕೇಸು ದಾಖಲಿಸಬೇಕಾಗಿ ಅಗ್ರಹಿಸುತ್ತೇವೆ.

















































