ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗೆ ಭೇಟಿ ನೀಡಿದ್ದ ದ.ಕ. ಜಿಲ್ಲಾ ಲೋಕಾಯುಕ್ತ ತಂಡದ ಮುಂದೆ ಸಾರ್ವಜನಿಕರು ಪಂಚಾಯತ್ ಪಿಡಿಒ ವಿರುದ್ಧ ಸಲ್ಲಿಸಿದ ದೂರುಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿವೆ ಎಂದು ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಆರೋಪಿಸಿದೆ.ಈ ಕುರಿತು ಯುವಮೋರ್ಚಾ ಅಧ್ಯಕ್ಷ ಶಿಶಿರ್ ಪೆರ್ವೋಡಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಪಿಡಿಒ, ಗ್ರಾಹಕರನ್ನು ಲಂಚಕ್ಕಾಗಿ ಸತಾಯಿಸಿ ಆಡಳಿತಾತ್ಮಕ ಭಯೋತ್ಪಾದನೆ ಬಿತ್ತುತ್ತಿದ್ದಾರೆ. ಲಂಚ ಸ್ವೀಕಾರವನ್ನು ಮರೆಮಾಚಲು ದಲ್ಲಾಳಿಗಳ ಮೂಲಕ ಲಕ್ಷಾಂತರ ರೂಪಾಯಿ ಬೇಡಿಕೆ ಇಡಲಾಗುತ್ತಿದೆ. ತಮ್ಮ ಸ್ವಂತ ಭೂಮಿಯಲ್ಲಿ ಮನೆ ಕಟ್ಟಿದ ಬಡ ವ್ಯಕ್ತಿಯಿಂದ ಮನೆ ನಂಬರ್ ಗಾಗಿಯೇ ಲಕ್ಷ ರೂಪಾಯಿ ಲಂಚ ಪಡೆಯಲಾಗುತ್ತಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರು ನೀಡುವ ಯಾವುದೇ ಅರ್ಜಿ ಅಥವಾ ಮನವಿಯನ್ನು ಸ್ವೀಕರಿಸಿ ಸ್ವೀಕೃತಿ ನೀಡಬೇಕಾದ ಪಂಚಾಯತ್ ಕಚೇರಿಯಲ್ಲಿ, ಪಿಡಿಒ ಒಪ್ಪಿಗೆ ಇದ್ದರೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಸಿಬ್ಬಂದಿಗಳೇ ಲೋಕಾಯುಕ್ತ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಇದರಿಂದ ಪಂಚಾಯತ್ ಕಚೇರಿ ಪಿಡಿಒ ಸ್ವಂತ ಆಸ್ತಿಯೇ ಎಂಬ ಪ್ರಶ್ನೆ ಮೂಡಿದೆ ಎಂದು ಯುವಮೋರ್ಚಾ ಆರೋಪಿಸಿದೆ.ಈಗಾಗಲೇ 7 ವರ್ಷಕ್ಕೂ ಹೆಚ್ಚು ಕಾಲ ಉಪ್ಪಿನಂಗಡಿಯಲ್ಲಿಯೇ ಇರುವ ಈ ಪಿಡಿಒ ಸರ್ಕಾರಿ ನಿಯಮದಂತೆ ವರ್ಗಾವಣೆಗೊಂಡಿದ್ದರೂ, ಪ್ರಭಾರದ ಹೆಸರಿನಲ್ಲಿ ಮತ್ತೆ ಅದೇ ಪಂಚಾಯತ್ ನಲ್ಲಿಯೇ ಉಳಿದುಕೊಂಡಿರುವುದು ರಾಜ್ಯ ಸರ್ಕಾರದ ಭ್ರಷ್ಟಾಚಾರ ಪೋಷಕ ನೀತಿಗೆ ಸಾಕ್ಷಿ ಎಂದು ದೂರಲಾಗಿದೆ.
“ಯಾರಾದರೂ ಲಂಚ ಕೇಳಿದರೆ ನನಗೆ ತಿಳಿಸಿ” ಎಂದು ಹೇಳುತ್ತಿದ್ದ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಈ ಪಿಡಿಒ ಕೃತ್ಯ ಕಾಣಿಸಲಿಲ್ಲವೇ? ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಿದರೂ ಪಿಡಿಒರನ್ನು ಇಲ್ಲಿಯೇ ಉಳಿಸಿಕೊಳ್ಳುವ ನಿಗೂಢತೆ ಏನು? ಗ್ರಾಮಸ್ಥರಿಂದ ಸುಲಿಗೆ ಮಾಡಿದ ಹಣದಲ್ಲಿ ಶಾಸಕರಿಗೂ ಪಾಲು ಸಲ್ಲುತ್ತಿದೆ ಎಂಬ ಪಿಡಿಒ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ? ಎಂದು ಯುವಮೋರ್ಚಾ ಪ್ರಶ್ನಿಸಿದೆ.ದ.ಕ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆದಾಯ ಹೊಂದಿರುವ ಉಪ್ಪಿನಂಗಡಿ ಗ್ರಾ.ಪಂ.ನ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಸದೆ,
ಕಚೇರಿ ನವೀಕರಣ ಮತ್ತು ಸೌಂದರ್ಯೀಕರಣಕ್ಕೆ ಮಾತ್ರ ಬಳಸಲಾಗುತ್ತಿದೆ. ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಶಾಸಕರು ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿರುವ ಯುವಮೋರ್ಚಾ, ಶಾಸಕರು ಉತ್ತರಿಸದಿದ್ದರೆ ಭ್ರಷ್ಟಾಚಾರದ ವಿರುದ್ಧ ಜನಾಂದೋಲನದ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.















































