ಪಂಜ: ಸುಳ್ಯ ತಾಲೂಕಿನ ಪ್ರಸಿದ್ಧ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನೇಮಕಗೊಂಡಿದ್ದ ಅರ್ಚಕರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.ದೇಗುಲದಲ್ಲಿ ಒಟ್ಟು 3 ಅರ್ಚಕರ ಹುದ್ದೆಗಳಿದ್ದು, ಪೂಜಾ ಕೈಂಕರ್ಯಗಳಿಗೆ ಅರ್ಚಕರ ಅಗತ್ಯವಿತ್ತು.
ಈ ನಡುವೆ ಸೆಪ್ಟೆಂಬರ್ 7ರಂದು ಶಿರಸಿಯ ಶೇಷಗಿರಿ ಭಟ್ ಎಂಬುವವರು ದೂರವಾಣಿ ಮೂಲಕ ಸಂಪರ್ಕಿಸಿ, ಅರ್ಚಕ ಹುದ್ದೆಗೆ ಬರಲು ಇಚ್ಛಿಸಿದ್ದರು. ಅವರು ಬಂದ ದಿನವೇ ಕ್ಷೇತ್ರ ತಂತ್ರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಲಾಗಿತ್ತು. ತಂತ್ರಿಗಳ ನಿರ್ದೇಶನದಂತೆ ಸೆಪ್ಟೆಂಬರ್ 9ರಂದು ಹೊಸ ಅರ್ಚಕರನ್ನು ತಂತ್ರಿಗಳ ಬಳಿ ಕರೆದೊಯ್ದು ಚರ್ಚಿಸಲಾಗಿತ್ತು. ತಂತ್ರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಪಡೆದು, ಅವರ ಸೂಚನೆಯಂತೆ ಶೇಷಗಿರಿ ಭಟ್ ಅವರನ್ನು 1 ತಿಂಗಳ ಕಾಲ ತಾತ್ಕಾಲಿಕ ಅರ್ಚಕರನ್ನಾಗಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿತ್ತು.
ಆದರೆ, ಸೆಪ್ಟೆಂಬರ್ 10ರಂದು ಈ ಅರ್ಚಕರ ಹಿನ್ನೆಲೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಆರೋಪಗಳು ಕೇಳಿಬಂದವು. ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ವ್ಯವಸ್ಥಾಪನಾ ಸಮಿತಿಯು, ವಿಷಯದ ಸತ್ಯಾಸತ್ಯತೆ ಪರಿಶೀಲಿಸಿ ಅವರನ್ನು ದೇಗುಲದ ತಾತ್ಕಾಲಿಕ ಅರ್ಚಕ ಹುದ್ದೆಯಿಂದ ತಕ್ಷಣವೇ ಬಿಡುಗಡೆಗೊಳಿಸಿದೆ ಎಂದು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















































