ವಳಲಂಬೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ಆ.27 ರಾತ್ರಿ ನಡೆದಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆ ನಂತರ ನಡೆಸಬಾರದು ಎಂದು ಸರ್ಕಾರದ ಆದೇಶವಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಕಾರ್ಯಕ್ರಮ ನಿಲ್ಲಿಸುವಂತೆ ತಿಳಿಸಿದರು. ಅದಾಗಲೇ 10 ಗಂಟೆ ಆಗಿದ್ದರಿಂದ 30 ನಿಮಿಷಗಳ ಕಾರ್ಯಕ್ರಮ ಬಾಕಿ ಇರುವಾಗಲೇ ಕಾರ್ಯಕ್ರಮ ಸ್ಥಗಿತಗೊಂಡಿತು.
ಕಾರ್ಯಕ್ರಮ ರದ್ದಾದ್ದರಿಂದ ಭಕ್ತಾದಿಗಳು ಹಾಗೂ ಕಲಾವಿದರಿಗೆ ನಿರಾಶೆಯಾಗಿದ್ದು, ಸರ್ಕಾರದ ಆದೇಶಕ್ಕೆ ಹಿಡಿಶಾಪ ಹಾಕುತ್ತ ಮನೆಗೆ ತೆರಳಿದರು.ಗಣೇಶೋತ್ಸವ ಸಮಿತಿ ಪೂರ್ವಾಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಸರಕಾರದ ಹಿಂದೂ ವಿರೋಧಿ ಧೋರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾವೂ ಭಾರತದಲ್ಲಿದ್ದೇವೋ ಪಾಕಿಸ್ತಾನದಲ್ಲಿದ್ದೇವೋ ಎಂದು ಗೊತ್ತಿಲ್ಲ. ಸರಕಾರದ ಈ ನಿಯಮಗಳಿಗೆ ನೋವಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದಾರೆ ಆದರೇ ಕ್ಷುಲ್ಲಕ ಕಾರಣಕ್ಕಾಗಿ ಸರಕಾರ ಇಂತಹ ಕಾನೂನು ಜಾರಿಗೆ ತಂದಿದೆ. ಇದನ್ನೆಲ್ಲಾ ವಿಘ್ನ ವಿನಾಯನೇ ಸರಿ ಮಾಡಬೇಕಿದೆ. ಒಂದು ಹಳ್ಳಿಯ ಪ್ರತಿಭೆಗಳನ್ನು ಮೇಲೇತ್ತುವ ಇಂತಹ ಕಾರ್ಯಕ್ರಮಗಳಿಗೆ 12 ಗಂಟೆ ವರೆಗಾದರೂ ಅವಕಾಶ ನೀಡಬೇಕಿತ್ತು. ನಾವೂ ಇಲ್ಲಿ ರಸ್ತೆ ಬದಿಯಲ್ಲಿ ಅಲ್ಲ, ದೇವಸ್ಥಾನದ ಒಳಗೆ ಮಾಡುತ್ತಿದ್ದೇವೆ. ಅದು ಅಲ್ಲದೇ ದೇವಸ್ಥಾನಗಳನ್ನು ಸರಕಾರ ಅಭಿವೃದ್ಧಿ ಪಡಿಸಿಲ್ಲ. ಭಕ್ತಾಧಿಗಳು, ದಾನಿಗಳಿಂದ ಮಾಡಿರುವುದು. ಪೋಲೀಸ್ ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಕಾರ್ಯಕ್ರಮ ನಿಲ್ಲಿಸುತ್ತಿದ್ದೇವೆ, ಕಲಾಭಿಮಾನಿಗಳು ಕಲಾವಿದರು ಬೇಸರಪಟ್ಟುಕೊಳ್ಳುವುದು ಬೇಡ ಇನ್ನೊಂದು ಕಾರ್ಯಕ್ರಮ ಕಾನೂನಾತ್ಮಕವಾಗಿ ಪರ್ಮಿಷನ್ ಪಡೆದು ಇಲ್ಲಿ ಮಾಡುವ ಎಂದರು.










































