ಮನುಷ್ಯತ್ವ ಮಾನವನ ನಡವಳಿಕೆಯಾದರೆ, ಹಿಂದುತ್ವ ಹಿಂದೂಗಳ ನಡವಳಿಕೆ. ಜಗತ್ತು ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಹಿಂದೂ ಸಂಸ್ಕೃತಿ ಉಳಿಯಬೇಕು. ಮಾತೃ ದೇವೋಭವ ಎಂದು ನಂಬಿದವರು ನಾವು. ಈ ಭೂಮಿಯನ್ನು ತಾಯಿಯೆಂದು ನಾವು ಕರೆಯುತ್ತೇವೆ. ನಮ್ಮ ಭೂಮಿ, ನಮ್ಮ ದೇಶವನ್ನು ನಾವು ಉಳಿಸಿಕೊಳ್ಳಬೇಕು. ನಾವು ಜಾತೀಯತೆಗೆ ಮಹತ್ವ ನೀಡದೆ, ಕಸುಬಿಗೆ ಮಹತ್ವ ನೀಡಬೇಕು. ಎಲ್ಲಾ ಜಾತಿಯವರನ್ನು ಗೌರವಿಸಬೇಕು. ಆಗ ಸಾಮಾಜಿಕ ಸಾಮರಸ್ಯ ಮೂಡುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಭೌದಿಕ್ ಪ್ರಮುಖರಾದ ಮುರಳೀಕೃಷ್ಣ ಉಡುಪಿ ಹೇಳಿದರು.
ಅವರು ಜ. 18ರಂದು ಹಿಂದೂ ಸಂಗಮ ಬಾಳಿಲ ಮಂಡಲ ಆಶ್ರಯದಲ್ಲಿ ಬಾಳಿಲದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡುತ್ತಾ ಹೇಳಿದರು. ಆಧ್ಯಾತ್ಮಿಕ ಉಪನ್ಯಾಸಕ ನೀಡಿದ ಶ್ರೀ ನಾಗಧರ್ಮೇಂದ್ರ ವೇದ ಸಂಜೀವಿನಿ ಪಾಠಾಶಾಲೆ ಆನೆಗುಂದಿ ಮಠ ಉಡುಪಿ ಇಲ್ಲಿಯ ಪ್ರಾಚಾರ್ಯರಾದ ಮೌನೇಶ್ ಶರ್ಮ ಮಾತನಾಡುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೀರಿ ಕಲಿಸುವುದಿಲ್ಲ. ಮಕ್ಕಳಿಗೆ ಸಂಸ್ಕಾರದ ಪಾಠ ಮನೆಯಿಂದ ಆಗಬೇಕು. ಪೋಷಕರ ದಿನಚರಿಯನ್ನು ನೋಡಿಕೊಂಡು ಮಕ್ಕಳು ಕಲಿಯುತ್ತಾರೆ. ಮನೆಯಲ್ಲಿ ಆಗುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಬೇಕು. ಆಗ ಅವರು ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ನಾವು ಸಂಸ್ಕಾರ, ಶಿಕ್ಷಣವನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕು ಎಂದರು.
ವೇದಿಕೆಯಲ್ಲಿ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಹಾಗೂ ಪ್ರಧಾನ ಗೌರವ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಕಾಂಚೋಡು ಪರಮೇಶ್ವರಯ್ಯ, ನಿವೃತ್ತ ಶಿಕ್ಷಕರುಗಳಾದ ಭಾಸ್ಕರ ರಾವ್ ಬಾಳಿ, ರಘುನಾಥ ಕಾಯಾರ, ಕೃಷಿಕರಾದ ಚಂದ್ರಹಾಸ ರೈ ಅಗಲ್ಪಾಡಿ, ಕೆ.ಎನ್. ಪರಮೇಶ್ವರ ಕಲ್ಮಡ್ಕ, ಓಬಯ್ಯ ನಾಯ್ಕ ಮಾಳಪ್ಪಮಕ್ಕಿ, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ,
ಬೆಳ್ಳಾರೆ ಪಿ.ಹೆಚ್.ಸಿ. ನಿವೃತ್ತ ಸಿಬ್ಬಂದಿ ಶ್ರೀಮತಿ ಬೇಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಸುಧಾಕರ ರೈ ಎ.ಎಂ. ಸ್ವಾಗತಿಸಿ, ಬಿಜೆಪಿ ಮಂಡಲ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಂದಿಸಿದರು. ರಾಮ್ ಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಸೃಜನ್ ಕೆ.ವಿ. ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು, ಹಿಂದೂ ಬಾಧವರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ಬಳಿಕ ತಾಲೀಮು ಪ್ರದರ್ಶನ ನಡೆಯಿತು.












































