ಉಡುಪಿಯ ಪ್ರಸಿದ್ಧ ಶ್ರೀಕೃಷ್ಣಮಠದಲ್ಲಿ ಭಕ್ತರಿಗಾಗಿ ಹೊಸ ವಸ್ತ್ರ ಸಂಹಿತೆ (Dress Code) ನಿಯಮವನ್ನು ಜಾರಿಗೆ ತರಲಾಗಿದೆ. ತಕ್ಷಣದಿಂದಲೇ ಈ ನಿಯಮ ಅನ್ವಯವಾಗಿದ್ದು, ದೇವಾಲಯ ಪ್ರವೇಶಿಸುವ ಭಕ್ತರು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಹೊಸ ನಿಯಮದಂತೆ, ಪುರುಷ ಭಕ್ತರು ದೇವಾಲಯದೊಳಗೆ ಪ್ರವೇಶಿಸುವ ವೇಳೆ ಅಂಗಿ ಹಾಗೂ ಬನಿಯನ್ಗಳನ್ನು ತೆಗೆದು, ಸಂಪ್ರದಾಯಬದ್ಧ ರೀತಿಯಲ್ಲಿ ಪ್ರವೇಶಿಸಬೇಕು. ದೇವಾಲಯದ ಪಾವಿತ್ರ್ಯ, ಶಿಸ್ತು ಮತ್ತು ಧಾರ್ಮಿಕ ಸಂಸ್ಕೃತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಈ ನಿಯಮವು ಭಕ್ತರ ಅನುಕೂಲಕ್ಕೂ ಹಾಗೂ ದೇವಸ್ಥಾನದ ಪವಿತ್ರತೆಯನ್ನು ಉಳಿಸಿಕೊಳ್ಳುವುದಕ್ಕೂ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವ ಭಕ್ತರು ಈ ಹೊಸ ನಿಯಮದ ಬಗ್ಗೆ ಮುಂಚಿತವಾಗಿ ಅರಿವು ಹೊಂದಿ, ಮಠದ ಸಂಪ್ರದಾಯಗಳಿಗೆ ಗೌರವ ನೀಡಿ ಸಹಕರಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.












































