ಶಬರಿಮಲೆ: ಅಯ್ಯಪ್ಪ ಸ್ವಾಮಿಯ ಮಂಡಲ ಮಕರಜ್ಯೋತಿ ಮಹೋತ್ಸವ ಜ.20ರಂದು ತೆರೆ ಬಿದ್ದಿತ್ತು. ಜ.21ರಂದು ದೇಗುಲದಲ್ಲಿ ಬೆಳಗಲಾದ ದೀಪವನ್ನು ನಂದಿಸಿ ಗರ್ಭಗುಡಿಯಿಂದ ಹೊರ ಬಂದು ದೇಗುಲ ಮುಚ್ಚಿ ಕೀಲಿಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಿದರು. ಫೆ.13ರಿಂದ ಕುಂಭ ಮಾಸದ ಪೂಜೆ ನಡೆಯಲಿದ್ದು, ಭಕ್ತರಿಗೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಕುಂಭ ಮಾಸದ ವಿಶೇಷ ಪೂಜೆಗಳು ಮುಖ್ಯವಾಗಿ ಮಂಡಲ ಪೂಜೆ ಮತ್ತು ಮಕರ ಸಂಕ್ರಾಂತಿಗೆ ಸಂಬಂಧಿಸಿವೆ, ಮಂಡಲ ಪೂಜೆ ನಂತರ ಕುಂಭ ಮಾಸ ಫೆಬ್ರುವರಿ-ಮಾರ್ಚ್ ಸಮಯದಲ್ಲಿ ನಡೆಯುತ್ತದೆ. ಈ ವೇಳೆ ಅಯ್ಯಪ್ಪನಿಗೆ ವಿಶೇಷ ಪೂಜೆಗಳು ನಡೆಯುತ್ತವೆ ಕುಂಭ ಮಾಸದಲ್ಲಿ ಮಹಿಳೆಯರ ಸಂಕ್ರಾಂತಿ ಪೂಜೆಗಳು ನಡೆಯುತ್ತವೆ, ಇದರಲ್ಲಿ ಮಹಿಳಾ ಭಕ್ತರು ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮಂಡಲ ಮಕರಜ್ಯೋತಿ ಮಹೋತ್ಸವಸಂಪನ್ನ
ಪಂದಳಂ ಅರಮನೆಯ ರಾಜ ಪ್ರತಿನಿಧಿ ಪುನರ್ಧನಾಳ್ ನಾರಾಯಣ ವರ್ಮ ಮಂಗಳವಾರ ಬೆಳಗ್ಗೆ ಅಯ್ಯಪ್ಪನ ದರ್ಶನ ಪಡೆದರು. ಬೆಳಗ್ಗೆ 5ಕ್ಕೆ ದೇಗುಲ ತೆರೆದ ಬಳಿಕ ಪೂರ್ವ ಮಂಟಪದಲ್ಲಿ ತಂತ್ರಿ ಕಂಠರರ್ ಮಹೇಶ್ ಮೋಹನರ್ ಗಣಪತಿ ಹೋಮ ನೆರವೇರಿಸಿದರು.ರಾಜ ಪ್ರತಿನಿಧಿಯ ದರ್ಶನದ ಬಳಿಕ ಪ್ರಧಾನ ಅರ್ಚಕ ಇ.ಡಿ.ಪ್ರಸಾದ್ ನಂಬೂದಿರಿ, ಅಯ್ಯಪ್ಪ ಮೂರ್ತಿಗೆ ಭಸ್ತಾಭಿಷೇಕ ನೆರವೇರಿಸಿ ಕೈಗೆ ಯೋಗದಂಡ ನೀಡಿ, ಕೊರಳಿಗೆ ಜಪ ಮಾಲೆ ತೊಡಿಸಿದರು.ಹರಿವರಾಸನಂ ಗಾಯನದೊಂದಿಗೆ ದೇಗುಲದಲ್ಲಿ ಬೆಳಗಲಾದ ದೀಪವನ್ನು ನಂದಿಸಿ ಗರ್ಭಗುಡಿಯಿಂದ ಹೊರ ಬಂದು ದೇಗುಲ ಮುಚ್ಚಿ ಕೀಲಿಯನ್ನು ರಾಜಪ್ರತಿನಿಧಿಗೆ ಹಸ್ತಾಂತರಿಸಿದರು.
ಏನಿದು ಕುಂಭ ಮಾಸ ಪೂಜೆ?
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ನಡೆಯುವ ಕುಂಭ ಮಾಸದ ಪೂಜೆ ವಿಶಿಷ್ಟವಾದದ್ದು. ಕುಂಭ ಮಾಸದ ಮಾಸಿಕ ಪೂಜೆ ನಡೆಯುವ ಹಿನ್ನೆಲೆ, ಅಯ್ಯಪ್ಪನ ಸನ್ನಿಧಿ ಐದು ದಿನ ತೆರೆದಿರಲಾಗುತ್ತದೆ. ‘ಕುಂಭಂ’ ಆರಂಭವಾಗುವ ಮುನ್ನಾದಿನ ಸಂಜೆ ದೇಗುಲ ತೆರೆದು, ತಿಂಗಳ ಐದನೇ ದಿನದಂದು ಹರಿವರಾಸನಂ ಹಾಡಿ ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಭಕ್ತರಿಗೆ ಈ ಕೆಳಗಿನ ವಿಶೇಷ ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಪ್ರತಿದಿನ ಬೆಳಿಗ್ ಹೋಮ ಪೂಜಾ ಕೈಂಕರ್ಯ ನಡೆಯುತ್ತದೆ.ಕುಂಭ ಮಾಸ ಪೂಜೆ ವೇಳೆ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ಮಾಡುವುದು ಆಕರ್ಷಕ. ಭಕ್ತರು ದರ್ಶನಕ್ಕಾಗಿ ಕೇರಳ ಪೊಲೀಸರ ಅಧಿಕೃತ ವೆಬ್ಸೈಟ್ನಲ್ಲಿ ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಪಂದಳಕ್ಕೆ ಹೊರಟ ತಿರುವಾಭರಣ ಮೆರವಣಿಗೆ
ಜ್ಯೋತಿಯಂದು ತೊಡಿಸಲು ಪಂದಳು ಅರಮನೆಯಿಂದ ತರಲಾದ ತಿರುವಾಭರಣಗಳ ಪೆಟ್ಟಿಗೆಯ ಮೆರವಣಿಗೆ 18 ಮೆಟ್ಟಿಲು ಇಳಿದು ಪಂದಳಕ್ಕೆ ಪ್ರಯಾಣ ಆರಂಭಿಸಿದೆ. ಮರುದನ್ ಮನಯಿಲ್ ಶಿವನ್ ಕುಟ್ಟಿ ನೇತೃತ್ವದ ತಿರುವಾಭರಣ ವಾಹಕ ಸಂಘ, ತಿರುವಾಭರಣಗಳ ಪೆಟ್ಟಿಗೆಯನ್ನು ಹೊತ್ತು ವಂದಳಕ್ಕೆ ವಾಪಸಾದರು. ಜ.21ರಂದು ಮಧ್ಯಾಹ್ನ 1.30ರಿಂದ ತಡರಾತ್ರಿ 2 ಗಂಟೆವರೆಗೆ ಪೆರುನಾಡ್ ಅಯ್ಯಪ್ಪ ದೇವಸ್ಥಾನ, ಜ.22ರಂದು ಅರಣ್ಣುಲ ಅರಮನೆಯಲ್ಲಿ ತಿರುವಾಭರಣಗಳ ದರ್ಶನ ಪಡೆಯಬಹುದು. ಜ.23ರಂದು ಪಂದಳದಲ್ಲಿ ಮೆರವಣಿಗೆ ಸ್ವಾಗತಿಸಿ, ಅರಮನೆಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗುವುದು












































