ಸುಬ್ರಹ್ಮಣ್ಯ: ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳೆದ ಎರಡು ತಿಂಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, 15 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.
ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ ಗೆ ದೇಶದ ಬೇರೆ ಬೇರೆ ಕಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4.56 ಲಕ್ಷ ಹಣ ಬಂದಿದ್ದರೆ, ಹುಂಡಿಯಲ್ಲಿ 1.9 ಕೋಟಿ ರೂ. ಸಂಗ್ರಹವಾಗಿದೆ. ಹಾಗೆ ಅನ್ನದಾನ ನಿಧಿಯಿಂದ 83.57 ಲಕ್ಷ ರೂ. ಆದಾಯ ಹರಿದು ಬಂದಿದೆ.
ಇನ್ನು ಡಿಸೆಂಬರ್ ತಿಂಗಳಲ್ಲಿ ನಾನಾ ಸೇವೆಗಳಿಂದ 5.30 ಲಕ್ಷ ಹಣ ಬಂದಿದ್ದರೆ, ಹುಂಡಿಯಲ್ಲಿ 1.99 ಕೋಟಿ ರೂ. ಸಂಗ್ರಹವಾಗಿದೆ. ಹಾಗೆ ಅನ್ನದಾನ ನಿಧಿಯಿಂದ 1.07 ಕೋಟಿರೂ. ಆದಾಯ ಗಳಿಸಿದೆ.
ಇದನ್ನು ಹೊರತು ಪಡಿಸಿ ವಸತಿ ಗೃಹ, ಇನ್ನಿತರ ಮೂಲಗಳಿಂದ ಸುಮಾರು 15 ಕೋಟಿ ರೂ. ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.












































