ಮಂಗಳೂರು: ರೈತರ ಬೇಡಿಕೆ ಅಡಕೆ, ಹಿನ್ನೆಲೆಯಲ್ಲಿ ಕಾಳುಮೆಣಸಿನಂತೆ ತೆಂಗು ಬೆಳೆಯನ್ನೂ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯಡಿ ತರುವ ಪ್ರಯತ್ನ ನಡೆದಿದೆ.
ರಾಜ್ಯ ಸರಕಾರದಿಂದ ಯೋಜನೆಗೆ ಶೀಘ್ರ ಅನುಮೋದನೆ ದೊರೆತು ವಿಮಾ ಕಂಪನಿಗಳ ಆಯ್ಕೆ ಟೆಂಡರ್ ಅಂತಿಮವಾದರೆ ಜೂನ್ನಿಂದ ಜಾರಿಗೆ ಬರಲಿದೆ. ತೆಂಗಿನ ಬೆಳೆಗೆ ಒಂದು ಹೆಕ್ಟೇರ್ಗೆ 65 ಸಾವಿರ ರೂ. ವಿಮಾ ಮೊತ್ತ ನಿಗದಿಪಡಿಸಿದ್ದು, ಬೆಳೆಗಾರ ಶೇ. 5ರಷ್ಟು ಪ್ರೀಮಿಯಂ ಪಾವತಿಸಬೇಕು. ಕೇಂದ್ರದ ಮಾರ್ಗಸೂಚಿ, ರಾಜ್ಯ ಸರಕಾರದ ನೀತಿ ನಿರ್ಧಾರ ಆಧರಿಸಿ ಜಿಲ್ಲಾ ಮಟ್ಟದಲ್ಲಿ ಮಾನದಂಡ ನಿಗದಿಯಾಗಲಿದೆ.
ವಿಮಾ ಹವಾಮಾನ ಆಧರಿತ ಬೆಳೆ ಯೋಜನೆಯಡಿ ಅಡಕೆ ಪ್ರತಿ ಹೆಕ್ಟೇರ್ಗೆ 1,28,000 ರೂ. ಹಾಗೂ ಕಾಳುಮೆಣಸು ಪ್ರತಿ ಹೆಕ್ಟೇರ್ಗೆ 47 ಸಾವಿರ ರೂ. ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಸೀಯಾಳ, ತೆಂಗು, ತೆಂಗಿನೆಣ್ಣೆ, ಕೊಬ್ಬರಿಗೆ ಈಗ ಉತ್ತಮ ದರವಿದ್ದರೂ ಕೀಟ ರೋಗ ಬಾಧೆ ಹೆಚ್ಚಿದೆ.
ರೋಗ, ಬರ/ಮಳೆ ಕೊರತೆ, ಅಧಿಕ ಮಳೆ ಹಾಗೂ ಉಷ್ಣಾಂಶದ ಏರಿಳಿತವನ್ನು ವಿಮಾ ಯೋಜನೆಯಡಿ ಪರಿಗಣಿಸಲಾಗುತ್ತದೆ. ಹೋಬಳಿ ಮಟ್ಟದಲ್ಲಿರುವ ಹವಾಮಾಪನ ಕೇಂದ್ರ ಹಾಗೂ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ ಹವಾಮಾನ ಆಧರಿತ ದತ್ತಾಂಶಗಳು ದಾಖಲಾಗುತ್ತವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ದತ್ತಾಂಶಗಳು ತೋಟಗಾರಿಕಾ ಇಲಾಖೆಯ ಸಂರಕ್ಷಣಾ ತಂತ್ರಾಂಶಕ್ಕೆ ರವಾನೆಯಾಗುತ್ತವೆ. ರೈತರ ಬೆಳೆ, ವ್ಯಾಪ್ತಿಗೆ ತಕ್ಕಂತೆ ಪರಿಹಾರ ನಿರ್ಧರಿಸಿ ವಿಮಾ ಕಂಪನಿ ಪಾವತಿಸುತ್ತದೆ.
ತೆಂಗು ಬೆಳೆ ಎಷ್ಟಿದೆ?
- ಭಾರತ: 21.65 ಲಕ್ಷ ಹೆಕ್ಟೇರ್ (ಉತ್ಪಾದನೆ: 21,373 ದಶಲಕ್ಷ ಕಾಯಿಗಳು)
- ಕರ್ನಾಟಕ: 5.64 ಲಕ್ಷ ಹೆಕ್ಟೇರ್ (ಉತ್ಪಾದನೆ: 6,151 ದಶಲಕ್ಷ ಕಾಯಿಗಳು)
- ಉಡುಪಿ ಜಿಲ್ಲೆ: 16,252 ಹೆಕ್ಟೇರ್ (ಉತ್ಪಾದನೆ: 1,950 ಲಕ್ಷ ಕಾಯಿಗಳು)
ಯಾರು ಏನು ಹೇಳಿದರು?
ಅಡಕೆ, ಕಾಳುಮೆಣಸಿನಂತೆ ತೆಂಗು ಬೆಳೆಯನ್ನು ಒಂದು ವರ್ಷದ ಏರಿಳಿತಕ್ಕೆ ಅನುಗುಣವಾಗಿ ಹವಾಮಾನ ಆಧರಿತ ವಿಮಾ ಯೋಜನಾ ವ್ಯಾಪ್ತಿಗೆ ತರಲು ಬೇಡಿಕೆಯಿದೆ. ಯೋಜನಾ ಪ್ರಸ್ತಾವನೆಗೆ ಸರಕಾರದ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಉಡುಪಿಯ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಹೇಳಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ತೆಂಗು ಬೆಳೆಯಿದ್ದು, ಕರಾವಳಿಯಲ್ಲಿ ವ್ಯಾಪಕವಾಗಿದೆ. ಕಾರ್ಕಳದಲ್ಲಿ ತೆಂಗು ಬೆಳೆ ವ್ಯಾಪ್ತಿ ಅತ್ಯಧಿಕ 5,461 ಹೆಕ್ಟೇರ್ನಲ್ಲಿದ್ದು 1,01,342 ತೆಂಗು ಬೆಳೆಗಾರರಿದ್ದಾರೆ. ಹವಾಮಾನದ ಏರುಪೇರು, ಕೀಟ ರೋಗಬಾಧೆ ಹಿನ್ನೆಲೆಯಲ್ಲಿ ಬೆಳೆ ವಿಮಾ ಯೋಜನೆ ರೈತರಿಗೆ ಅನುಕೂಲಕರವಾಗಲಿದೆ ಎಂದು ಉಡುಪಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳೆ ಹೇಳಿದರು.













































