ಒನ್ ನೇಶನ್ ಒನ್ ಎಲೆಕ್ಷನ್ ಪದ್ದತಿ ಇದ್ದರೆ, ಪದ್ಮ ಪ್ರಶಸ್ತಿ ಹೇಗೆ ಕೊಡ್ತಾ ಇದ್ರಿ? ಚಿದಂಬರಂ ಪುತ್ರನ ಪ್ರಶ್ನೆಗೆ ಬಿಜೆಪಿ ಸುಸ್ತು

Picture of Savistara

Savistara

Bureau Report

ಚೆನ್ನೈ : ವಿವಿಧ ಕ್ಷೇತ್ರದ 131 ಗಣ್ಯರಿಗೆ 2026ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಎಂಟು ಜನರಿಗೆ ಈ ಪ್ರಶಸ್ತಿ ಲಭಿಸಿದರೆ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಸಾಧಕರಿಗೆ ಸಿಂಹಪಾಲು ಲಭಿಸಿದೆ. ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ಪ್ರಶಸ್ತಿ ಆಯ್ಕೆಯ ಮಾನದಂಡವನ್ನು ಪರೋಕ್ಷವಾಗಿ ಪ್ರಶ್ನಿಸಿ, ವ್ಯಂಗ್ಯವಾಡಿದ್ದಾರೆ.ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಕಾರ್ತಿ ಚಿದಂಬರಂ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ. ಒಂದು ರಾಷ್ಟ್ರ ಒಂದು ಚುನಾವಣೆ ( One Nation One Election ), ಜಾರಿಗೆ ಬಂದರೆ, ಪದ್ಮ ಪ್ರಶಸ್ತಿಯನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂದು ಕಾರ್ತಿ, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.ಕಾರ್ತಿ ಚಿದಂಬರಂ, ಟ್ವಿಟ್ಟರ್ (ಎಕ್ಸ್) ನಲ್ಲಿ ಮಾಡಿರುವ ಪೋಸ್ಟ್’ಗೆ ವ್ಯಾಪಕ ಪರ/ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದನ್ನು ಇಟ್ಟುಕೊಂಡು, ಕಾರ್ತಿ ಟ್ವೀಟ್ ಮಾಡಿರುವ ಹಿನ್ನಲೆಯಲ್ಲಿ, ಅವರ ಎಕ್ಸ್ ಪೋಸ್ಟ್ ವೈರಲ್ ಆಗಿದೆ.ಕಾರ್ತಿ ಚಿದಂಬರಂ ಇಂಗ್ಲಿಷ್ ನಲ್ಲಿ ಮಾಡಿದ ಟ್ವೀಟ್ ಕನ್ನಡ ಅರ್ಥ ಹೀಗಿದೆ, ” ಇನ್ ಕೇಸ್ ಒಂದು ರಾಷ್ಟ್ರ ಒಂದು ಚುನಾವಣೆ ಪದ್ದತಿ ನಮ್ಮಲ್ಲಿ ಇದ್ದರೆ, ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಆದರೆ, ಈಗ ಎಲ್ಲವೂ ಸಿಂಪಲ್, ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆಯೋ, ಆಯಾಯ ರಾಜ್ಯದ ಸಾಧಕರನ್ನು ಆಯ್ಕೆ ಮಾಡಿದರೆ ಆಯಿತು” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಈ ಬಾರಿಯ ಪದ್ಮ ಪ್ರಶಸ್ತಿಯಲ್ಲಿ ದಕ್ಷಿಣದ ರಾಜ್ಯಗಳ ಹೆಚ್ಚಿನ ಪಾಲನ್ನು ಪಡೆದಿದೆ. ಆದರೆ, ಅತಿಹೆಚ್ಚು ಅಂದರೆ ಹದಿನೈದು ಪದ್ಮ ಪ್ರಶಸ್ತಿ ಸಿಕ್ಕಿರುವುದು, ಮಹಾರಾಷ್ಟ್ರಕ್ಕೆ. ಅಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ಎಲ್ಲವೂ ಮುಕ್ತಾಯಗೊಂಡಿದೆ. ಇದರ ನಂತರ, ತಮಿಳುನಾಡಿನ ಹದಿಮೂರು ಗಣ್ಯರಿಗೆ ಪ್ರಶಸ್ತಿ ಲಭಿಸಿದೆ. ಇದಕ್ಕೆ, ಪರೋಕ್ಷವಾಗಿ ಕಾರ್ತಿ ಚಿದಂಬರಂ ವ್ಯಂಗ್ಯವಾಡಿರುವುದು.ವಿಧಾನಸಭಾ ಚುನಾವಣೆ ನಡೆಯುತ್ತಿರುವ ತಮಿಳುನಾಡು (13), ಕೇರಳ (7), ಪಶ್ಚಿಮ ಬಂಗಾಳದ (11) ಸಾಧಕರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಲಭಿಸಿದೆ. ಇದನ್ನು ಉಲ್ಲೇಖಿಸಿ, ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರಕ್ಕೆ 15 ಮತ್ತು ಕರ್ನಾಟಕಕ್ಕೆ 8 ಪ್ರಶಸ್ತಿ ಲಭಿಸಿದೆ. ಇಲ್ಲಿ ಯಾವ ಚುನಾವಣೆ ಇದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಜಿಬಿಎ ( Greater Bengaluru) ಚುನಾವಣೆ ಕೂಡಾ ಸದ್ಯದಲ್ಲೇ ಇದೆ.ಇನ್ನು ಕಾರ್ತಿ ಚಿದಂಬರಂ ಅವರ ಟ್ವೀಟಿಗೆ ಬಂದಿರುವ ಆಯ್ದ ಪ್ರತಿಕ್ರಿಯೆಗಳನ್ನು ನೋಡುವುದಾದರೆ, ’ಸರಿಯಾದ ಸಾಧಕರನ್ನು ಮೋದಿ ಸರ್ಕಾರ ಆಯ್ಕೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಮ್ಮ (UPA) ಸರ್ಕಾರದ ಅವಧಿಯಲ್ಲಿ ಅಪಾರ್ಟ್ಮೆಂಟ್ ಮಟ್ಟದಲ್ಲಿ ಪ್ರಶಸ್ತಿ ಸಿಗುವುದಕ್ಕೂ ಯೋಗ್ಯರಲ್ಲದವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ’ ಎಂದು ಒಬ್ಬರು ರಿಪ್ಲೈ ಮಾಡಿದ್ದಾರೆ.ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಯಾವುದೇ ಚುನಾವಣೆಯಿಲ್ಲ, ಅಲ್ಲಿನ ಸಾಧಕರಿಗೆ ಹೇಗೆ ಪ್ರಶಸ್ತಿ ಲಭಿಸಿತು? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಅತಿಹೆಚ್ಚಿನ ಮಾನ್ಯತೆಯನ್ನು ನೀಡಲಾಗಿದೆ. ದೇಶದ ಅತ್ಯುನ್ನತ ಗೌರವವನ್ನು ಚುನಾವಣೆಗಾಗಿ ಮಾರಲಾಗಿದೆ ಎಂದು ಇನ್ನೊಬ್ಬರು, ಕಾರ್ತಿ ಚಿದಂಬರಂ ಪ್ರಶ್ನೆಯನ್ನು ಸಮರ್ಥಿಸಿಕೊಂಡಿದ್ದಾರೆ.

[t4b-ticker]
error: Content is protected !!