ಬಿಜೆಪಿಗೆ ಶಾಕ್..! ಚುನಾವಣಾ ಉಸ್ತುವಾರಿಗೆ ಅಣ್ಣಾಮಲೈ ರಾಜೀನಾಮೆ

Picture of Savistara

Savistara

Bureau Report

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕ ಅಣ್ಣಾಮಲೈ ಅವರು ಅನಿರೀಕ್ಷಿತ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮಗೆ ವಹಿಸಲಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಗೆ ಅವರು ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಗೆ ಕಾರಣವೇನು?

ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅಣ್ಣಾಮಲೈ, “ನನ್ನ ತಂದೆಯ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ತಂದೆಯ ಆರೈಕೆ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸುವುದು ಸದ್ಯ ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ನಾನು ಕೊಯಂಬತ್ತೂರಿನಲ್ಲೇ ವಾಸ್ತವ್ಯ ಹೂಡಬೇಕಿದೆ. ಈ ಕಾರಣದಿಂದ ರಾಜ್ಯದ ಆರು ವಿವಿಧ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಚುನಾವಣಾ ಜವಾಬ್ದಾರಿ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಉಸ್ತುವಾರಿ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ.” ಎಂದು ತಿಳಿಸಿದ್ದಾರೆ.

ಯಾವ ಕ್ಷೇತ್ರಗಳ ಜವಾಬ್ದಾರಿ ಇತ್ತು?

2026ರ ತಮಿಳುನಾಡು ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿವೆ. ಈ ಪೈಕಿ ಬಿಜೆಪಿ ಸ್ಪರ್ಧಿಸುತ್ತಿರುವ 41 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿತ್ತು. ಅಣ್ಣಾಮಲೈ ಅವರಿಗೆ ಸಿಂಗನಲ್ಲೂರು, ಮದುರೆ ದಕ್ಷಿಣ, ವಿರುಂಗಂಪಾಕಂ, ಕಾರೈಕುಡಿ, ಶ್ರೀವೈಕಂಠಮ್ ಮತ್ತು ಪದ್ಮನಾಭಪುರಂ ಕ್ಷೇತ್ರಗಳ ಹೊಣೆ ನೀಡಲಾಗಿತ್ತು. ಈಗ ಅಣ್ಣಾಮಲೈ ರಾಜೀನಾಮೆಯಿಂದಾಗಿ ಈ ಕ್ಷೇತ್ರಗಳಿಗೆ ಪಕ್ಷವು ಹೊಸ ಉಸ್ತುವಾರಿಗಳನ್ನು ನೇಮಕ ಮಾಡಲಿದೆ.

ಚುನಾವಣಾ ಸ್ಪರ್ಧೆಯ ಬಗ್ಗೆ ಸಸ್ಪೆನ್ಸ್:

2026ರ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸೂಕ್ತ ಸಮಯದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗುವುದು,’ ಎಂದು ಹೇಳಿದ್ದಾರೆ. ಸದ್ಯ ಕೊಯಂಬತ್ತೂರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ತಮ್ಮ ರಾಜೀನಾಮೆ ನಿರ್ಧಾರವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂಥಿರನ್ ಅವರಿಗೆ ಈಗಾಗಲೇ ತಿಳಿಸಿರುವುದಾಗಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲೇ ಫೈರ್ ಬ್ರಾಂಡ್ ನಾಯಕ ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ತಮಿಳುನಾಡು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.

[t4b-ticker]
error: Content is protected !!