ಬೆಂಗಳೂರು: ಕರ್ನಾಟಕದಲ್ಲಿ ಐಪಿಎಸ್ ಅಧಿಕಾರ ವರ್ಗಾವಣೆ ಮುಂದುವರೆದಿದೆ. ಜನಪ್ರಿಯ, ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಪೊಲೀಸ್ ಉಪ ಮಹಾ ನಿರ್ದೇಶಕರಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯನ್ನು ಐಪಿಎಸ್ (ವೇತನ) ನಿಯಮಗಳು 2016 ರ ನಿಯಮ 12 ರ ಅಡಿಯಲ್ಲಿ ಅಪರಾಧ ತನಿಖಾ ಇಲಾಖೆಯ ಉಪ ಮಹಾನಿರೀಕ್ಷಕರ ಹುದ್ದೆಗೆ ಸ್ಥಾನಮಾನ ಮತ್ತು ಜವಾಬ್ದಾರಿಗಳಿಗೆ ಸಮಾನವೆಂದು ಘೋಷಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಇನ್ನೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಯಾಗಿದ್ದ ಭಾರತಿ ಡಿ ಅವರನ್ನು ವರ್ಗಾವಣೆ ಮಾಡಿದ್ದು, ಸ್ಥಳ ನಿಯೋಜನೆ ಮಾಡಿಲ್ಲ.
2023 ರಲ್ಲಿ ವರ್ಗಾವಣೆ
ಯಾಗಿತ್ತುಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿದ್ದ ರವಿ ಡಿ ಚನ್ನಣ್ಣನವರನ್ನು 2023 ರಲ್ಲಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೆಲ ಸಮಯದ ಬಳಿಕ ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆಗೆ ನಿಯೋಜಿಸಲಾಗಿತ್ತು. ಸದ್ಯ ಎರಡೂವರೆ ವರ್ಷದ ಬಳಿಕ ಮತ್ತೆ ಸ್ಥಳ ಬದಲಾವಣೆ ಮಾಡಲಾಗಿದೆ.
ಪೊಲೀಸ್ ಇಲಾಖೆಯಿಂದ ದೂರದ ಹುದ್ದೆ!
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈವರೆಗೂ ಪೊಲೀಸ್ ಇಲಾಖೆಯ ಇತರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದ ಚನ್ನಣ್ಣನವವರನ್ನು ಬೇರೆ ಇಲಾಖೆ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
ಕೆಲ ವರ್ಷದಿಂದ ಖಾಲಿ ಇದ್ದೀನಿ ಎಂದಿದ್ದ ಅಧಿಕಾರಿ2008ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಹೊಸಪೇಟೆ, ಬೆಂಗಳೂರು, ಹಾಸನ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು, ಪೊಲೀಸ್ ಆಡಳಿತ ಇಲಾಖೆಗಳಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದಾರೆ. ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿ ಚನ್ನಣ್ಣನವರ್ ಕಳೆದ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿ “ಕೆಲ ವರ್ಷದಿಂದ ಖಾಲಿನೇ ಇದೀವಿ ” ಎಂದು ತಮ್ಮ ಹುದ್ದೆಯ ಬಗ್ಗೆ ಮಾರ್ಮಿಕವಾಗಿ ಹೇಳಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವರನ್ನು ಇಲಾಖೆಯ ಕಚೇರಿ ಕೆಲಸಕ್ಕೆ ಸೀಮಿತಗೊಳಿಸಿದ್ದಕ್ಕೆ ಅವರ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದರು.
ಐಎಎಸ್ – ಐಪಿಎಸ್ ವರ್ಗಾವಣೆ : 2025 ಡಿಸೆಂಬರ್ 31 ರಂದು ಹಲವು 50 ಕ್ಕೂ ಅಧಿಕ ಐಪಿಎಸ್ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಇಲಾಖೆಗಳ ನಿರ್ದೇಶಕರ ಬದಲಾವಣೆಯಾಗಿತ್ತು. ಆ ಬಳಿಕ ಗಲಭೆ ಹಿನ್ನೆಲೆ ಬಳ್ಳಾರಿ ಎಸ್ಪಿ, ಅಲೋಕ್ ಕುಮಾರ್ – ಬಿ ದಯಾನಂದ್ ಅವರ ಹುದ್ದೆ ಅದಲು ಬದಲಾಗಿದ್ದವು. ಇನ್ನು ವಿವಾದಕ್ಕೀಡಾದ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ವರ್ಗಾವಣೆಯಾಗಿತ್ತು.












































